ಬೆಂಗಳೂರು: ವಿಟಮಿನ್ ಡಿ ಮೂಳೆಗಳ ಆರೋಗ್ಯಕ್ಕೆ ಮಾತ್ರವಲ್ಲ. ಇದು ದೇಹದಲ್ಲಿನ ಪೌಷ್ಟಿಕಾಂಶವನ್ನು ಹೀರಿಕೊಳ್ಳಲು ಮತ್ತು ಇತರ ಹಲವಾರು ಚಟುವಟಿಕೆಗಳಿಗೆ ಅಗತ್ಯವಾಗಿದೆ. ಈ ವಿಟಮಿನ್ ಡಿ ಯನ್ನು ನೈಸರ್ಗಿಕವಾಗಿ ಪ್ರತಿದಿನ ಅಗತ್ಯ ಪ್ರಮಾಣದಲ್ಲಿ ಸೇವಿಸುವುದರಿಂದ ಕ್ಯಾನ್ಸರ್ ಸಂಬಂಧಿತ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗಿದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಈ ಸಂಬಂಧ ಜರ್ಮನ್ ಕ್ಯಾನ್ಸರ್ ರಿಸರ್ಚ್ ಕೇಂದ್ರ ಅಧ್ಯಯನ ನಡೆಸಿದೆ. ಪ್ರತಿನಿತ್ಯ ವಿಟಮಿನ್ ಡಿ ಸೇವನೆ ಮಾಡುವುದರಿಂದ ಕ್ಯಾನ್ಸರ್ನಿಂದ ಸಾವನ್ನಪ್ಪುವ ಅಪಾಯವನ್ನು ಶೇ 12ರಷ್ಟು ಕಡಿಮೆ ಮಾಡಬಹುದು. ಅದರಲ್ಲೂ ವಿಶೇಷವಾಗಿ 70 ವರ್ಷಗಳ ಮೇಲ್ಪಟ್ಟವರಲ್ಲಿ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅಧ್ಯಯನ ತಿಳಿಸಿದೆ.
ಅಧ್ಯಯನ ಫಲಿತಾಂಶ: ಕ್ಯಾನ್ಸರ್ನಿಂದ ಸಂಭವಿಸುವ ಸಾವಿನ ಮೇಲೆ ವಿಟಮಿನ್ ಡಿ ಪರಿಣಾಮ ಕುರಿತು ಡಾ ಬೆನ್ ಶಾಟ್ಕರ್ ತಂಡ ಅಧ್ಯಯನ ನಡೆಸಿದ್ದು, ಜರ್ನಲ್ ಏಜಿಂಗ್ ರಿಸರ್ಜ್ ರಿವ್ಯೂನಲ್ಲಿ ಪ್ರಕಟವಾಗಿದೆ. ವಿಟಮಿನ್ ಡಿ ಮತ್ತು ಕ್ಯಾನ್ಸರ್ ನಡುವಿನ ಸಂಬಂಧಗಳ ಕುರಿತು ಈ ಮೊದಲೇ ಅಧ್ಯಯನಗಳನ್ನು ನಡೆಸಲಾಗಿದೆ. ಆದರೆ, ಇವು ಸರಿಯಾದ ಮತ್ತು ಸ್ಪಷ್ಟವಾದ ಫಲಿತಾಂಶ ನೀಡಿಲ್ಲ. ಆದಾಗ್ಯೂ, ಕೆಲವು ಅಧ್ಯಯನಗಳು ವಿಟಮಿನ್ ಡಿ ಪೂರಕಗಳು ಕ್ಯಾನ್ಸರ್ ಸಾವಿನ ಪ್ರಮಾಣದಲ್ಲಿ ಉತ್ತಮ ಫಲಿತಾಂಶ ನೀಡುತ್ತವೆ ಎಂಬುದನ್ನು ತಿಳಿಸಿದೆ. ಹಿಂದಿನ ಅಧ್ಯಯನಗಳ ಆಧಾರದ ಮೇಲೆ ಡಾ ಶಾಟ್ಕರ್ ಮತ್ತು ತಂಡ ವಿಟಮಿನ್ ಡಿ3 ಪ್ರಯೋಜನಗಳ ಕುರಿತು ಗಮನ ಕೇಂದ್ರಿಕರಿಸಿದೆ.
ಈ ಅಧ್ಯಯನದಲ್ಲಿ, ಸಂಶೋಧಕರು 12 ಅಧ್ಯಯನಗಳ ದತ್ತಾಂಶ ಮತ್ತು 1,05,000 ಜನರ ಫಲಿತಾಂಶ ಸೇರಿದಂತೆ ದತ್ತಾಂಶಗಳನ್ನು ವಿಶ್ಲೇಷಿಸಿದ್ದಾರೆ. ಈ ಅಧ್ಯಯನದ ಭಾಗಿದಾರರು ನೇರವಾಗಿ ವಿಟಮಿನ್ ಡಿ ಪಡೆದ ದತ್ತಾಂಶವನ್ನು ಒಳಗೊಂಡಿದೆ. ಪ್ರತಿನಿತ್ಯ ವಿಟಮಿನ್ ಡಿ ಸೇವಿಸಿದವರಲ್ಲಿ, ಇದು ಕ್ಯಾನ್ಸರ್ ಸಾವಿನ ಮೇಲೆ ಗಮನಾರ್ಹ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಅಧ್ಯಯನ ತಿಳಿಸಿದೆ.
ಪ್ರತಿನಿತ್ಯ ವಿಟಮಿನ್ ಡಿ3 ಅನ್ನು ನಿಯಮಿತವಾಗಿ ಸೇವನೆ ಮಾಡದವರಿಗಿಂತ, ನಿತ್ಯ ಸೇವನೆ ಮಾಡಿದವರಲ್ಲಿ ಕ್ಯಾನ್ಸರ್ ಮರಣದ ಅಪಾಯ ಶೇ 12ರಷ್ಟು ಇಳಿಕೆ ಆಗಿರುವುದು ಕಂಡು ಬಂದಿದೆ. ಈ ಅಧ್ಯಯನಕ್ಕೆ 70 ವರ್ಷದ ಮತ್ತು ಅದಕ್ಕಿಂತ ಹೆಚ್ಚಿನವರನ್ನು ಭಾಗಿಯಾಗಿಸಲಾಗಿದೆ. ವಯಸ್ಸಾದಂತೆ ಕ್ಯಾನ್ಸರ್ ಅಪಾಯ ಹೆಚ್ಚುವುದನ್ನು ಈ ಅಧ್ಯಯನ ತಿಳಿಸಿದೆ. ಆದರೆ, ವ್ಯಕ್ತಿ 50 ವರ್ಷವಾದ ಬಳಿಕ ಪ್ರತಿನಿತ್ಯ ವಿಟಮಿನ್ ಡಿ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ ಎಂದು ತಿಳಿಸಿದೆ. ವೈದ್ಯರ ಪ್ರಕಾರ, ವಿಟಮಿನ್ ಡಿ ವ್ಯಕ್ತಿಯ ಒಟ್ಟಾರೆ ಆರೋಗ್ಯಕ್ಕೆ ಅಗತ್ಯವಾಗಿದ್ದು, ಹಲವು ಪ್ರಯೋಜನ ಹೊಂದಿದೆ.
ವಿಟಮಿನ್ ಡಿ ಪ್ರಯೋಜನಗಳು..
- ಇದು ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುತ್ತದೆ
- ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.
- ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ
- ಸ್ನಾಯು ಬೆಳವಣಿಗೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಜೊತೆಗೆ ಆರೋಗ್ಯಕರ ನರ ಮಂಡಲ ವ್ಯವಸ್ಥೆಗೆ ಸಹಕಾರಿಯಾಗಿದೆ.
ಇದನ್ನೂ ಓದಿ: ದೀರ್ಘಕಾಲದ ಆಯಾಸ, ನೋವು ನಿವಾರಣೆಗೆ ಇಲ್ಲಿದೆ ಪರಿಹಾರ