ಮುದ್ದೇಬಿಹಾಳ(ವಿಜಯಪುರ): ಇಲ್ಲಿನ ಸಹಕಾರಿ ಬ್ಯಾಂಕೊಂದು ಕೊರೊನಾ ವೈರಸ್ನಿಂದಾಗಿ ಘೋಷಿಸಿರುವ ಲಾಕ್ಡೌನ್ ಸಮಯದಲ್ಲಿ ಬಡವರ ಹಸಿವು ತಣಿಸಲು ಮುಂದಾಗಿದ್ದು, 1,500ಕ್ಕೂ ಅಧಿಕ ಬಡವರಿಗೆ ದಿನಸಿ ಕಿಟ್ ವಿತರಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.
ತಾಲೂಕಿನ ನಾಲತವಾಡ ಪಟ್ಟಣದ ಶ್ರೀ ಶರಣ ವೀರೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಪಾಟೀಲ್(ನಾಲತವಾಡ) ಮಾತನಾಡಿ, ಬ್ಯಾಂಕಿನ ಏಳಿಗೆಯಲ್ಲಿ ಬಡವರು, ಸ್ಥಿತಿವಂತರು ಎಲ್ಲರೂ ನೆರವಾಗಿದ್ದಾರೆ. ಇದೀಗ ಕೊರೊನಾ ಸಂಕಷ್ಟದ ಸಮಯದಲ್ಲಿ ಅಂತಹ ಬಡವರಿಗೆ ನೆರವಾಗಲು ಬ್ಯಾಂಕಿನಿಂದ ದಿನಸಿ ಕಿಟ್ ವಿತರಿಸಲು ನಿರ್ಧರಿಸಲಾಗಿದೆ ಎಂದರು.
ಬ್ಯಾಂಕಿನ ವ್ಯವಸ್ಥಾಪಕ ನಾಗರಾಜ ಗಂಗನಗೌಡರ ಮಾತನಾಡಿ, ಸಮಾಜದಲ್ಲಿ ಯಾವ್ಯಾವ ವೇಳೆಯಲ್ಲಿ ಸಂಕಷ್ಟ ಎದುರಾಗಿದೆಯೋ ಆಗ ಬಡವರ ನೆರವಿಗೆ ಬ್ಯಾಂಕು ಧಾವಿಸಿ ತನ್ನ ಸಾಮಾಜಿಕ ಕಳಕಳಿಯನ್ನು ತೋರಿದೆ. ಸದ್ಯಕ್ಕೆ ಬ್ಯಾಂಕಿನಿಂದ 1500-1600 ಬಡವರಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಒಂದು ಕಿಟ್ಗೆ 600-700 ರೂ. ವೆಚ್ಚವಿದ್ದು ಹಸಿವಿನಿಂದ ಯಾರೂ ಬಳಲಬಾರದು ಎಂಬ ಉದ್ದೇಶದಿಂದ ಇದನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ದಿನಸಿ ಕಿಟ್ ಹೊತ್ತೊಯ್ದ ಬಾಲಕ:
ಆರು ವರ್ಷದ ಬಾಲಕನೊಬ್ಬ ತನ್ನ ತೂಕಕ್ಕಿಂತಲೂ ಅಧಿಕ ಭಾರವಾಗಿದ್ದ ಕಿಟ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ಒಯ್ದಿದ್ದು ಗಮನ ಸೆಳೆಯಿತು.
ನಾಲತವಾಡ ಪಟ್ಟಣದ ವಿನಾಯಕ ನಗರ, ಗಂಗನಗೌಡರ ಓಣಿಯಲ್ಲಿ ಬ್ಯಾಂಕ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಿದರು. ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಪಾಟೀಲ, ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ ಹಾಗೂ ನಿರ್ದೇಶಕರು ಇದ್ದರು.
ಇದನ್ನೂ ಓದಿ: ಲಾಕ್ಡೌನ್ ಮುಂದುವರಿಸಿ ಎಂದ ಸಲಹಾ ಸಮಿತಿ ; ಆದ್ರೆ ಈ ಕಾರಣದಿಂದ ಜಾರಿ ಅನುಮಾನ!