ವಿಜಯಪುರ: ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆಗಳ ವೀಕ್ಷಣೆ ನಡೆಸಿದ್ದಾರೆ.
ತೊಗರಿ ಬೆಳೆಯಲ್ಲಿ ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, ಈ ಬಾರಿ ಹಿಂಗಾರು ಸುರಿದ ಪರಿಣಾಮ ಉತ್ತಮ ಇಳುವರಿ ಬಂದ ಹಿನ್ನೆಲೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಜಿಲ್ಲೆಯ 3.27 ಹೆಕ್ಟೇರ್ ಕೃಷಿ ಭೂಮಿಯಲ್ಲಿ ರೈತರು ತೊಗರಿ ಬೆಳೆದಿದ್ದು, ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸರ್ಕಾರ ಕಳೆದ ವರ್ಷ 5675 ರೂ. ಬೆಂಬಲ ಬೆಲೆ ನೀಡಿ ಪ್ರತಿ ರೈತರಿಂದ ನೇರವಾಗಿ 10 ಕ್ವಿಂಟಾಲ್ ತೊಗರಿ ಖರೀದಿಗೆ ಮುಂದಾಗಿತ್ತು. ರಾಜ್ಯ ಸರ್ಕಾರ ಕೂಡ ಪ್ರೋತ್ಸಾಹಧನವಾಗಿ 425 ರೂ. ನೀಡಿ ಅಂತಿಮವಾಗಿ ಪ್ರತಿ ಕ್ವಿಂಟಾಲ್ ತೊಗರಿಗೆ 6100 ರೂ. ಬೆಲೆ ನೀಡಿ ಖರೀದಿ ಮಾಡಿತ್ತು.
ಈ ವರ್ಷ ತೊಗರಿ ಬೆಳೆಗೆ ಕೇಂದ್ರ ಸರ್ಕಾರ 5400 ರೂ. ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಜಿಲ್ಲೆಯ ರೈತರು ರಾಜ್ಯ ಸರ್ಕಾರದ ಬೆಲೆಗೆ ಕಾದು ಕುಳಿತ್ತಿದ್ದಾರೆ. ಇನ್ನು ವಿಜಯಪುರ ಜಿಲ್ಲಾದ್ಯಾಂತ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಸ್ಥಾಪಿಸುವಂತೆ ರೈತರ ಒತ್ತಾಯವಾಗಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಸರಿಯಾದ ಬೆಲೆ ರೈತರ ಕೈ ಸೇರದಿರೋದಕ್ಕೆ ಜಿಲ್ಲೆಯ ರೈತರು ಆಕ್ರೋಶಗೊಂಡಿದ್ದಾರೆ. ಈ ವರ್ಷ ಸರ್ಕಾರ ರೈತರಿಂದ ನೇರವಾಗಿ ತೊಗರಿ ಖರೀದಿಸಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಖುದ್ದಾಗಿ ರೈತರ ಜಮೀನುಗಳಿಗೆ ತೆರಳಿ ತೊಗರಿ ಬೆಳೆ ವೀಕ್ಷಣೆ ಮಾಡಿದ್ದಾರೆ.