ವಿಜಯಪುರ : ಗುಮ್ಮಟನಗರಿಯಲ್ಲಿ ಕೊರೊನಾ ಭೀತಿಯಿಂದ ಹಾಗೂ ಖರೀದಿದಾರರ ಕೊರತೆಯಿಂದ ಬಳಲುತ್ತಿದ್ದ ಒಣ ದ್ರಾಕ್ಷಿ ಮಾರುಕಟ್ಟೆಗೆ ಜೀವ ಕಳೆ ಬಂದಂತಾಗಿದೆ. ಲಾಕ್ಡೌನ್ ತೆರವುಗೊಂಡ ಬಳಿಕ ಕಳೆದ ಎರಡು ವಾರಗಳಿಂದ ಆನ್ಲೈನ್ ಒಣದ್ರಾಕ್ಷಿ ಮಾರುಕಟ್ಟೆ ಆರಂಭಗೊಂಡಿದೆ. ಮಹಾರಾಷ್ಟ್ರದ ಮುಂಬೈ, ಸಾತವಾವ್, ಕೊಲ್ಲಾಪುರ ಸೇರಿ ಹಲವು ಭಾಗಗಳಿಂದ ಖರೀದಿದಾರು ಗುಮ್ಮಟನಗರಿಯತ್ತ ಮುಖ ಮಾಡಿದ್ದಾರೆ.
ಮಾರುಕಟ್ಟೆಗೆ ರೈತರ ಬೆಂಬಲ ಉತ್ತಮವಾಗಿದೆ. ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಒಣದ್ರಾಕ್ಷಿ ಬೆಲೆ ನಿಗದಿಯಾಗುತ್ತಿಲ್ಲವಾದ ಕಾರಣದಿಂದ ಕೆಜಿಗೆ ಕನಿಷ್ಠ ₹350 ಬೆಲೆ ನಿಗದಿಯಾಗಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಈ ಮೊದಲು ಜಿಲ್ಲೆಯಲ್ಲಿ 1.20 ಲಕ್ಷ ಮೆಟ್ರಿಕ್ ಟನ್ ಒಣ ದ್ರಾಕ್ಷಿ ಉತ್ಪಾದನೆಯಾಗುತ್ತಿದ್ದು, ಕೊರೊನಾ ಭೀತಿಯಿಂದ ರೈತರು ಕಂಗಾಲಾಗಿದ್ದರು.
ವಿಜಯಪುರ ಒಣ ದ್ರಾಕ್ಷಿ ಮಾರುಕಟ್ಟೆಯಲ್ಲಿ ಬಾಗಲಕೋಟೆ, ಬೆಳಗಾವಿ, ಮಹಾರಾಷ್ಟ್ರ ಭಾಗದ ರೈತರು ಭಾಗಿಯಾಗುತ್ತಿದ್ದಾರೆ. ಅಲ್ಲದೆ ಬಹಿರಂಗ ಹರಾಜು ಪದ್ಧತಿಗಿಂತ ಆನ್ಲೈನ್ ಮಾರುಕಟ್ಟೆಯತ್ತ ಒಲವು ತೋರುತ್ತಿದ್ದಾರೆ. ಅಲ್ಲದೆ ಲಾಕ್ಡೌನ್ ಆದ ನಷ್ಟವನ್ನ ಒಣದ್ರಾಕ್ಷಿ ಮಾರಾಟದಿಂದ ಪಡೆಯುವ ಲಾಭದಿಂದ ಮರೆಯುವ ನಿರೀಕ್ಷೆಯಲ್ಲಿದ್ದಾರೆ.
ಎಪಿಎಂಸಿ ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ ಜುಲೈ 25ರಂದು ಮಾರುಕಟ್ಟೆಗೆ 17 ಜನ ಖರೀದಿದಾರರು ಬಂದಿದ್ದರು. ಪ್ರತಿ ಕೆಜಿ ಒಣದ್ರಾಕ್ಷಿ ₹90 ರಿಂದ 181 ರೂಪಾಯಿಯವರೆಗೆ ಮಾರಾಟವಾಗಿತ್ತು. ಶನಿವಾರ ಒಟ್ಟು 3900 ಬಾಕ್ಸ್ಗಳು ಮಾರುಕಟ್ಟೆಗೆ ಬಂದ್ರೆ 20 ಖರೀದಿದಾರರು ಬಂದಿದ್ದಾರೆ. ಒಟ್ಟು 4129 ಬಾಕ್ಸ್ ಒಣದ್ರಾಕ್ಷಿ ಸ್ಯಾಂಪಲ್ಗೆ ಬಂದಿತ್ತು.
ಒಟ್ಟು 18.50 ಕೋಟಿಯಷ್ಟು ಆನ್ಲೈನ್ ಮಾರುಕಟ್ಟೆಯಲ್ಲಿ ವಹಿವಾಟು ನಡೆದಿದೆ. ದರವು ಕೂಡ 105 ರೂ.ಗಳಿಂದ 201 ರೂ.ಗಳಿಗೆ ಬೆಲೆ ನಿಗದಿಯಾಗಿ ಕೊಂಚ ಏರಿಕೆ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.