ಶಿರಸಿ/ಉತ್ತರ ಕನ್ನಡ: ಕಳೆದ ನಾಲ್ಕು ದಿನಗಳಿಂದ ಶಿರಸಿ ತಾಲೂಕಿನ ವಿವಿಧ ಭಾಗದಲ್ಲಿ ಆನೆಗಳ ಹಿಂಡು, ಶಿರಸಿ ಅರಣ್ಯ ವಲಯದ ಉಂಚಳ್ಳಿ ಭಾಗದಲ್ಲಿ ಓಡಾಡಿದ ಪರಿಣಾಮ ಕೃಷಿ ಜಮೀನು ಹಾಳಾಗಿದೆ.
ಮೂರು ದೊಡ್ಡ ಆನೆ ಮತ್ತು ಒಂದು ಮರಿ ಆನೆಯ ಹಿಂಡು ತಾಲೂಕಿನ ಬದನಗೋಡು, ಕ್ಯಾದಗಿಕೊಪ್ಪ, ಕಂತ್ರಾಜಿ ಸೇರಿದಂತೆ ವಿವಿಧ ಭಾಗದಲ್ಲಿ ಓಡಾಡಿದೆ. ಅಲ್ಲಿಂದ ಪುನಃ ಮರಳಿ ಹೋಗುವ ಬದಲಿಗೆ ಇದೇ ಮೊದಲ ಬಾರಿಗೆ ಪಶ್ಚಿಮ ಭಾಗದತ್ತ ಆನೆಗಳು ಮುಖ ಮಾಡಿದ್ದು, ಅವುಗಳ ಕಾಲ್ತುಳಿತಕ್ಕೆ ನಾಲ್ಕಾರು ಎಕರೆ ಕೃಷಿ ಭೂಮಿ ಹಾಳಾಗಿದೆ.
ಉಂಚಳ್ಳಿ ಗ್ರಾಮದ ಕಬ್ಬೆ, ಹಲಸಿನಕೊಪ್ಪ ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ಜಮೀನಿನಲ್ಲಿ ಭತ್ತ, ಅಡಕೆ, ಕಬ್ಬಿನ ಬೆಳೆಗಳು ಆನೆಗಳ ಹಾವಳಿಗೆ ಬಲಿಯಾಗಿದೆ. ಕಟಾವಿಗೆ ಬಂದಿದ್ದ ಭತ್ತದ ತೆನೆಗಳು ಮುರಿದು ಬಿದ್ದಿವೆ. ಇನ್ನು ಬಾಳೆ ತೋಟಕ್ಕೆ ನುಗ್ಗಿ ದಾಂಧಲೆ ಮಾಡಿದೆ. ಅಡಕೆ ಮತ್ತು ಕಬ್ಬಿನ ಬೆಳೆಗಳು ನಾಶವಾಗಿದೆ.