ಉಡುಪಿ: ತಾಲೂಕಿನ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಪುಜೆ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಪಂಚಾಯತ್ ಯೋಜನೆ ರೂಪಿಸಿದ್ದು, ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಈ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್ ಮಾಡಲು ಯೋಜನೆ ಸಿದ್ಧಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದ್ದರು. ನಂತರ ಯೋಜನೆಯನ್ನು ತಡೆಹಿಡಿಯಲಾಗಿದೆ. ಇದೀಗ ಮತ್ತೆ ಪಾಪುಜೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಸ್ಥಳೀಯ ಪಂಚಾಯತ್ ಯೋಜನೆ ರೂಪಿಸಿದೆ. ಯಾವುದೇ ಕಾರಣಕ್ಕೂ ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪಾಪುಜೆ ಪ್ರದೇಶದಲ್ಲಿ ಸುಮಾರು 84 ಕ್ಕೂ ಅಧಿಕ ಮನೆಗಳಿದ್ದು, 300 ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ತ್ಯಾಜ್ಯ ಘಟಕ ನಿರ್ಮಾಣ ಮಾಡಿದರೆ ಪರಿಸರ ಮಾಲಿನ್ಯದ ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇಲ್ಲಿಯ ನಿವಾಸಿಗಳದ್ದು. ಪಕ್ಕದಲ್ಲಿಯೇ ಸುವರ್ಣಾ ನದಿ ಹರಿಯುತ್ತಿದ್ದು, ಈ ನದಿಯ ನೀರು ಮಣಿಪಾಲ, ಉಡುಪಿ ನಗರಗಳಿಗೆ ಸರಬರಾಜಾಗುತ್ತಿದೆ. ಅಲ್ಲೇ ಸಮೀಪ ಬ್ರಹ್ಮಸ್ಥಾನದ ಗುಡಿ ಕೂಡ ಇದೆ. ಒಂದು ವೇಳೆ ಇಲ್ಲಿ ಘಟಕ ನಿರ್ಮಾಣವಾದರೆ ಪರಿಸರ ಹಾಳಾಗುವುದರ ಜೊತೆಗೆ ಧಾರ್ಮಿಕ ಭಾವನೆಗೂ ಧಕ್ಕೆ ಬರುತ್ತೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಗ್ರಾಮ ಪಂಚಾಯತ್ ಜನವಸತಿ ಇಲ್ಲದ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕು. ಇಲ್ಲಿ ಘಟಕ ನಿರ್ಮಾಣಕ್ಕೆ ಮುಂದಾದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪಂಚಾಯತ್ಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಸಕ್ಸಸ್ ಆಯ್ತು ಮಂಡ್ಯ ರಾಗಿ... 30 ದಿನ ಮೊದಲೇ ಕಟಾವು