ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿಗೆ ಹೋಗಬೇಕಾದರೆ ಆಂಧ್ರ ಪ್ರದೇಶದ ಮಡಕಶಿರಾ ತಾಲೂಕಿನ ಮೂಲಕ ಹಾದು ಹೋಗಲೇಬೇಕು. ಇದರಿಂದ ಅಂತಾರಾಜ್ಯ ಫರ್ಮಿಟ್ ಹೊಂದಿಯೇ ಹಳದಿ ಬಣ್ಣದ ನಂಬರ್ ವಾಹನಗಳು ಹೋಗಬೇಕು ಎಂದು ಆಧ್ರದ ಆರ್ಟಿಒ ಇಲಾಖೆ ದಂಡ ವಸೂಲಿ ಮಾಡುತ್ತಿದೆಯಂತೆ.
ಪಾವಗಡಕ್ಕೆ ಹೋಗಬೇಕಾದರೆ ಆಂಧ್ರದ ಮಡಕಶಿರಾ ತಾಲೂಕಿನ ಒಳಗೆ ಪ್ರವೇಶ ಮಾಡಿಯೇ ಹೋಗಬೇಕು. ಚಂದ್ರಭಾವಿ ಮತ್ತು ರಾಜವಂತಿ ಗಡಿ ಭಾಗದ ನಡುವೆ ಸರಿಸುಮಾರು 9 ಕಿ.ಮೀ. ಆಂಧ್ರದ ಮಡಕಶಿರಾ ತಾಲೂಕಿನ ಒಳಗೆ ಹಾದುಹೋಗಬೇಕಾಗುತ್ತದೆ. ಈ ಅನಿವಾರ್ಯತೆಯೇ ಖಾಸಗಿ ಬಸ್, ಟ್ಯಾಕ್ಸಿ ಚಾಲಕರ ಸಂಕಷ್ಟಕ್ಕೆ ಕಾರಣವಾಗಿದೆ. ಗಡಿಯಲ್ಲಿ ಅಂತಾರಾಜ್ಯ ಫರ್ಮಿಟ್ ಇಲ್ಲದ ಹಳದಿ ಬೋರ್ಡ್ನ ವಾಹನಗಳಿಗೆ ದಂಡ ವಿದಿಸುತ್ತಿದ್ದಾರೆ, ದಂಡ ಕಟ್ಟದ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.
ಒಂದು ಒಪ್ಪಂದದ ಪ್ರಕಾರ ಆಂಧ್ರ ರಾಜ್ಯದೊಳಗೆ 16 ಕಿ.ಮೀ. ದೂರದವರೆಗೆ ಕರ್ನಾಟಕದ ವಾಹನಗಳು ಅಂತಾರಾಜ್ಯ ಫರ್ಮಿಟ್ ಇಲ್ಲದೇ ಓಡಾಡಬಹುದು ಎಂದಿದೆ. ಆದರೂ ಆಂಧ್ರದ ಅಧಿಕಾರಿಗಳು ಈ ನಿಯಮ ಧಿಕ್ಕರಿಸಿ ಕರ್ನಾಟಕದ ಚಾಲಕರಿಗಳಿಗೆ ರಾಕ್ಷಸರಂತೆ ವಕ್ಕರಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ವಿಪರ್ಯಾಸ ಅಂದ್ರೆ ತುಮಕೂರು ಜಿಲ್ಲಾಸ್ಪತ್ರೆಯಿಂದ ಕೋವಿಡ್ ಲಸಿಕೆಯನ್ನು ಪಾವಗಡಕ್ಕೆ ಖಾಸಗಿ ವಾಹನದಲ್ಲಿ ಸಾಗಿಸುತ್ತಿದ್ದಾಗ 10,500 ದಂಡ ವಿಧಿಸಲಾಗಿತ್ತು. ಅದೇ ರೀತಿ ಖಾಸಗಿ ಬಸ್ಗೆ 1 ಲಕ್ಷ 5 ಸಾವಿರ ರೂ. ದಂಡ ಹಾಕುತಿದ್ದಾರೆ. ಟಿ.ಟಿ. ವಾಹನಕ್ಕೆ 18 ಸಾವಿರ ಫೈನ್ ಹಾಕುತ್ತಿದ್ದಾರೆ.
ಪರಿಣಾಮ ತುಮಕೂರು ಜಿಲ್ಲೆಯದ್ದೇ ಇನ್ನೊಂದು ತಾಲೂಕಿಗೆ ಓಡಾಡುವುದು ಕಷ್ಟವಾಗುತ್ತಿದೆ. ಆಂಧ್ರಕ್ಕೆ ಹೊಂದಿಕೊಂಡಿರುವ ಪಾವಗಡ ತಾಲೂಕಿನ ಖಾಸಗಿ ವಾಹನ ಮಾಲೀಕರಿಗೆ ಇದರಿಂದ ಹೆಚ್ಚಿಗೆ ತೊಂದರೆ ಉಂಟಾಗುತ್ತಿದೆ. ಆಂಧ್ರದ ಆರ್ಟಿಒ ಅಧಿಕಾರಿಗಳು ದುಸ್ವಪ್ನದಂತೆ ಕಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಬಗ್ಗೆ ರಾಜ್ಯದ ಅಧಿಕಾರಿಗಳು ಗಮನ ಹರಿಸಬೇಕಿದೆ.
ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್ ರಾಜ್ ಕುಮಾರ್ಗೆ ಮರಣೋತ್ತರ ಗೌರವ ಡಾಕ್ಟರೇಟ್