ಶಿವಮೊಗ್ಗ: ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗೊಲ್ಲರಹಟ್ಟಿ ಗ್ರಾಮಸ್ಥರು ಪ್ರವೇಶ ನಿರಾಕರಿಸಿ ಅಸ್ಪೃಶ್ಯತೆ ಆಚರಿಸಿರುವುದನ್ನು ಕರ್ನಾಟಕ ರಾಜ್ಯ ಮಾದಿಗ ಸಮಾಜ ಖಂಡಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಾಧ್ಯಕ್ಷ ಎಸ್.ಮಂಜುನಾಥ್, ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳು ಕಳೆದರೂ ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಿದ್ದಾರೆ. ಕೇಂದ್ರ ಸರ್ಕಾರದ ಹಲವು ಸವಲತ್ತುಗಳನ್ನು ನೀಡಲು ಭೇಟಿ ಮಾಡಿದ ಸಂದರ್ಭದಲ್ಲಿ ಮಾದಿಗ ಜನಾಂಗಕ್ಕೆ ಸೇರಿದ ಸಂಸದರು ಎಂಬ ಕಾರಣಕ್ಕೆ ಗ್ರಾಮದ ಒಳಗಡೆ ಬಿಡದೆ, ಊರಿನ ಹೊರಗೆ ಆಸನ ಹಾಕಿ ಉಳಿದ ಅಧಿಕಾರಿಗಳಿಗೆ ಪ್ರವೇಶ ನೀಡಿರುವುದು ಅಕ್ಷಮ್ಯ ಅಪರಾಧ.ಈ ಸಂದರ್ಭದಲ್ಲಿ ಸಂಸದರ ರಕ್ಷಣೆಗೆ ಬಂದ ಪೊಲೀಸರು ಸಹ ಸುಮ್ಮನೆ ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಸಮಾನತೆ ಬಗ್ಗೆ ಮಾತನಾಡುವ ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಘಟನೆಗೆ ಸಂಬಂಧಿಸಿದ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಮಾದಿಗ ಸಮಾಜ ಗೊಲ್ಲರ ಹಟ್ಟಿಗೆ ನುಗ್ಗಬೇಕಾಗುತ್ತದೆ ಎಂದು ಎಚ್ಚರಿಸಿದರು.