ರಾಮನಗರ: ವಿಶ್ವದಲ್ಲಿಯೇ ಅತಿ ಎತ್ತರದ ಯೇಸುವಿನ ಏಕ ಶಿಲಾ ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ಹಾರೋಬೆಲೆ ಗ್ರಾಮದಲ್ಲಿ ಶಿಲಾನ್ಯಾಸ ನೇರವೇರಿಸಿದರು. ಡಿಸೆಂಬರ್ 25ರ ಯೇಸುಕ್ರಿಸ್ತನ ಜನ್ಮದಿನದ ಹಿನ್ನಲೆ ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಇಟ್ಟು ಕ್ರೈಸ್ತ ಬಾಂಧವರೊಂದಿಗೆ ಸೇರಿ ಮಾದರಿ ಯೇಸು ಪ್ರತಿಮೆಯ ಮುಂದೆ ಪ್ರಾರ್ಥನೆ ಸಲ್ಲಿಸಿದರು.
ಹಾರೋಬೆಲೆ ಗ್ರಾಮದ ಬಳಿಯಿರುವ ಕಪಾಲಿಬೆಟ್ಟದಲ್ಲಿ 114 ಅಡಿ ಎತ್ತರದ ಏಕ ಶಿಲಾ ಯೇಸು ಪ್ರತಿಮೆ ನಿರ್ಮಾಣಕ್ಕೆ ಸುಮಾರು 10 ಎಕರೆ ಜಾಗದ ಅವಶ್ಯಕತೆಯಿದೆ. ಈ ಹಿನ್ನೆಲೆ ಡಿ.ಕೆ ಸಹೋದರರೇ ಸರ್ಕಾರಕ್ಕೆ ತಮ್ಮ ಸ್ವಂತ ಹಣ ಪಾವತಿಸಿ ಜಾಗದ ದಾಖಲೆ ಪತ್ರಗಳನ್ನು ಯೇಸು ಪ್ರತಿಮೆ ನಿರ್ಮಾಣದ ಜವಾಬ್ದಾರಿ ಹೊತ್ತ ಟ್ರಸ್ಟ್ ಗೆ ಹಸ್ತಾಂತರ ಮಾಡಿದರು.
ಹಾರೋಬೆಲೆ ಗ್ರಾಮದಲ್ಲಿ ಶೇ.90ರಷ್ಟು ಕ್ರೈಸ್ತ ಸಮುದಾಯದವರೇ ನೆಲಸಿದ್ದು, ಗ್ರಾಮದ ಸನಿಹದಲ್ಲೇ ಇರುವ ಕಪಾಲಿ ಬೆಟ್ಟದ ಮೇಲೆ ಯೇಸು ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ 13 ಅಡಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ಮುಗಿದಿದೆ. ಇಂದು ಯೇಸು ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿದೆ.
![Worlds heightest Yesu statue construction: D. K brothers contribute](https://etvbharatimages.akamaized.net/etvbharat/prod-images/kn-rmn-04-juses-statue-kkp-7204219_26122019115113_2612f_1577341273_1099.jpg)
ಇನ್ನು ಪ್ರತಿಮೆಯ ಬಲಬಾಗದ ಪಾದಕ್ಕೆ ಪೂಜೆ ಸಲ್ಲಿಸಿ, ಅಲ್ಲೇ ಪ್ರಾರ್ಥನೆ ಸಲ್ಲಿಸಿ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ನೀಡಿದ ಡಿಕೆಶಿ ಸಹೋದರರನ್ನು ಕ್ರೈಸ್ತ ಸಮುದಾಯದವರು ಸನ್ಮಾನಿಸಿದರು.