ರಾಯಚೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೇರವಾಗಿ ರೈತರಿಗೆ ತಲುಪಿಸುವ ಉದ್ದೇಶದಿಂದ ಪಹಣಿ ಹಾಗೂ ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲೆಯ 30,90,079 ರೈತರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ.
ಕೃಷಿ ಸನ್ಮಾನ್, ಬೆಳೆ ಸಮೀಕ್ಷೆ, ಬೆಂಬಲ ಬೆಲೆ, ಬೆಳೆ ವಿಮೆ, ನರೇಗಾ ಯೋಜನೆಯಲ್ಲಿ ಉದ್ಯೋಗ, ಹಾಲು ಉತ್ಪಾದನೆಗೆ ಸಬ್ಸಿಡಿ ಸೇರಿದಂತೆ ಇತರ ಇಲಾಖೆಯ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಪಹಣಿ ಹಾಗೂ ಆಧಾರ್ ಸಂಖ್ಯೆ ಜೋಡಣೆ ಕಾರ್ಯ ಪ್ರಗತಿಯಲ್ಲಿದ್ದು, ರೈತರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಜಿಲ್ಲೆಯ ಒಟ್ಟು 6,31,207 ರೈತರಲ್ಲಿ 30,90,079 ರೈತರು ತಮ್ಮ ಪಹಣಿ ಹಾಗೂ ಆಧಾರ್ ಸಂಖ್ಯೆ ಜೋಡಿಸುವ ಮೂಲಕ ರಾಜ್ಯದಲ್ಲಿ ಜಿಲ್ಲೆಯನ್ನು 12 ಸ್ಥಾನಕ್ಕೆ ಕೊಂಡೊಯಿದ್ದಿದ್ದು, ಕಳೆದ ಹದಿನೈದು ದಿನಗಳಲ್ಲಿ 26,689 ರೈತರು ನೋಂದಣಿ ಮಾಡಿಕೊಂಡಿದ್ದಾರೆ.
ಈ ಜೋಡಣೆ ಕಾರ್ಯವನ್ನು ಪ್ರತಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಮಾಡಲಾಗುತ್ತಿದೆ. ಜೊತೆಗೆ ಕೃಷಿ ಅಧಿಕಾರಿಗಳು ರೈತರ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ 32,21,028 ರೈತರ ಮಾಹಿತಿ ಸಂಗ್ರಹಿಸಲಿದ್ದಾರೆ.
ಓದಿ: ಹುಲ್ಲು ತರಲು ಹೋದ ಬಾಲಕಿಯರು ಕೈ-ಕಾಲುಗಳು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆ... ಇಬ್ಬರು ಸಾವು!
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ, ರೈತರ ಪಹಣಿ ಮತ್ತು ಆಧಾರ್ ಸಂಖ್ಯೆ ಜೋಡಣೆ ಕಾರ್ಯ ಸರ್ಕಾರದ ವಿವಿಧ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ಸಹಾಯವಾಗಲಿದೆ. ರೈತರು ಯಾವುದೇ ರೀತಿಯ ತಪ್ಪು ಕಲ್ಪನೆಗೆ ಒಳಗಾಗದೇ ಆಧಾರ್ ಮತ್ತು ಪಹಣಿ ಜೋಡಣೆಗೆ ಕೃಷಿ ಅಧಿಕಾಗಳೊಂದಿಗೆ ಸಹಕರಿಸಬೇಕು ಎಂದರು.