ರಾಯಚೂರು: ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದ ಮಸ್ಕಿ ಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ವ್ಯಕ್ತಿಯೋರ್ವ ಇಂದು ಮುಳ್ಳುಕಂಟಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಚನ್ನಬಸವ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ವ್ಯಕ್ತಿ. ಜಿಲ್ಲೆಯಲ್ಲಿ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದ ಮಸ್ಕಿ ಜಲಾಶಯ ಭರ್ತಿಯಾಗಿತ್ತು. ಹೀಗಾಗಿ ಜಲಾಶಯದಿಂದ ಹಳ್ಳಕ್ಕೆ ನೀರನ್ನು ಹರಿಬಿಡಲಾಗಿತ್ತು. ಚನ್ನಬಸವ ಹಾಗೂ ಇನ್ನೊಬ್ಬ ವ್ಯಕ್ತಿ ಬಹಿರ್ದೆಸೆಗೆ ಹಳ್ಳಕ್ಕೆ ತೆರಳಿ ಪ್ರವಾಹಕ್ಕೆ ಸಿಲುಕಿದ್ದರು. ಈ ಘಟನೆಯಲ್ಲಿ ಚನ್ನಬಸಪ್ಪ ನಾಪತ್ತೆಯಾಗಿದ್ದ.
ತಾಲೂಕಾಡಳಿತ ರಕ್ಷಣಾ ಕಾರ್ಯಾಚರಣೆ ಮಾಡಿ, ಪರಿಣಿತ ಈಜುಗಾರರಿಂದ ಶೋಧ ಕಾರ್ಯ ನಡೆಸಿದ್ದರೂ ಚನ್ನಬಸವ ಪತ್ತೆಯಾಗಿರಲಿಲ್ಲ. ಇಂದು ಮೀನುಗಾರರು ಹಳ್ಳದ ಕಡೆ ಹೋದಾಗ ಹಳ್ಳದ ಮುಳ್ಳುಕಂಟಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಮಸ್ಕಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.