ಮೈಸೂರು: ಶಿಕ್ಷಣ ಪಡೆದವರು ಜಾತಿ ಸಂಕೋಲೆಯಲ್ಲಿ ಸಿಲುಕದೇ ವಿಶ್ವಮಾನವರಾಗಬೇಕು, ಬಸವಣ್ಣನವರ ಚಿಂತನೆಯಂತೆ ಕಾಯಕ, ದಾಸೋಹಕ್ಕೆ ಹೆಚ್ಚಿನ ಒತ್ತು ನೀಡಿ, ಸಮಾಜದಲ್ಲಿ ಸಮಾನತೆಯಿಂದ ಬಾಳುವ ಧ್ಯೇಯ ಹೊಂದಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯಗಳ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ, ಕರ್ನಾಟಕ ಘಟಕ ವತಿಯಿಂದ ಸಂತಶ್ರೇಷ್ಠ ಕನಕದಾಸರ ಜಯಂತಿಯ ಪ್ರಯುಕ್ತ ಕನಕ ಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ನಮ್ಮಪ್ಪ ಇದ್ದ ಜಾತಿಯಲ್ಲಿ ನಾವು ಹುಟ್ಟಿದ್ದೇವೆ ಅಷ್ಟೇ, ಅದೇ ಜಾತಿಯಲ್ಲಿ ಇರಬೇಕು. ಇವಾಗ ಕನ್ವಟ್೯ ಆಗಬಹುದೇನೋ ಅಷ್ಟೇ. ನಾವು ಯಾರು ಕೂಡ ಇಂತಹ ಜಾತಿಯಲ್ಲಿ ಹುಟ್ಟಬೇಕು ಅಂತ ಅರ್ಜಿ ಹಾಕಿಕೊಂಡವರಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲಿ ನೋಡಿ.. GHMC ಚುನಾವಣೆಯಲ್ಲಿ ಟಿಆರ್ಎಸ್ನ ಜನತೆ ತಿರಸ್ಕರಿಸಿದ್ದಾರೆ : ಡಿಸಿಎಂ ಅಶ್ವತ್ಥ್ ನಾರಾಯಣ್
ಶಿಕ್ಷಣ, ಅಧಿಕಾರ, ಹಣಗಳಿಸಿದರೂ ಜಾತಿ ಸಂಕೋಲೆಯಿಂದ ಹೊರಬರುತ್ತಿಲ್ಲ. ಜಾತಿ ಕೇಳಿ ಹುಟ್ಟುವುದಾಗಿದ್ದರೆ ನಾನು ಮೇಲ್ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುತ್ತಿದ್ದೆ. ಜಾತಿಗಿಂತ ಮಾನವೀಯ ಮೌಲ್ಯಗಳು ಮನುಷ್ಯನಲ್ಲಿರಬೇಕು ಎಂದರು.
ಬಸವಣ್ಣನವರ ವಚನಗಳಲ್ಲಿ ಒಂದಾದ ಇವನಾರವ, ಇವನಾರವ ವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ವಚನದಲ್ಲಿ ಇವನಾರವ ಎಂಬುದಕಷ್ಟೇ ನಿಲ್ಲಿಸಿಬಿಡುತ್ತಾರೆ. ಇವ ನಮ್ಮವ ಎಂದು ಹೇಳುವುದೇ ಇಲ್ಲ. ಜಯಂತಿಗಳ ಆಚರಿಸುವವರು ಮೊದಲು ಆ ಮಹಾನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಮಹಾನೀಯರ ದಾರಿಯಲ್ಲಿ ನಡೆದರೆ, ಸಮಾಜ ಸುಧಾರಣೆಯಾಗಲಿದೆ ಎಂದರು.
ಕನಕದಾಸರು ಶಿಕ್ಷಣ ಕಲಿತು ಜಗತ್ತಿಗೆ ಸತ್ಯಸಂದೇಶಗಳ ಸಾರಿದ್ದಾರೆ. ಕನಕದಾಸರು ಯುದ್ಧದಲ್ಲಿ ಜ್ಞಾನೋದಯವಾಗಿ ಹಂತ,ಹಂತವಾಗಿ ಬದಲಾವಣೆ ಕಂಡುಕೊಂಡರು. ಧನಕನಕವನ್ನು ದಾನ ಮಾಡಿ ಕನಕನಾದರೂ, ದಾಸರ ಪರಂಪರೆ ಸೇರಿ ಕನಕದಾಸರಾದರು. ಇಂದಿಗಿಂತ ಹಿಂದೆ ಈ ಸಮಾಜವು ಬಹಳ ಶೋಚನೀಯವಾಗಿತ್ತು. ಜಾತಿ, ತಾರತಮ್ಯ,ಅಸಮಾನತೆಗಳು ಹೆಚ್ಚಾಗಿತ್ತು. ಇದರ ನಡುವೆಯೂ ಕನಕದಾಸರು ಶಿಕ್ಷಣ ಕಲಿತು ಸಮಾಜಕ್ಕೆ ಸತ್ಯಸಂದೇಶಗಳನ್ನು ತಿಳಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.