ಮೈಸೂರು: ಹೊರಗಿನ ವ್ಯಕ್ತಿಗಳು ಅನವಶ್ಯಕವಾಗಿ ತಮ್ಮ ಏರಿಯಾಗೆ ಪ್ರವೇಶಿಸದಂತೆ ಸ್ಥಳೀಯ ನಿವಾಸಿಗಳೇ ಸೀಲ್ ಡೌನ್ ಮಾಡಿರುವ ಘಟನೆ ನಗರದ ಉಪ್ಪಿನ ಕೇರಿಯಲ್ಲಿ ನಡೆದಿದೆ.
ಕೊರೊನಾದ ಹಾಟ್ ಸ್ಪಾಟ್ ಆಗಿ ರೆಡ್ ಝೋನ್ ನಲ್ಲಿ ಇರುವ ಸಾಂಸ್ಕೃತಿಕ ನಗರಿಯ ಜನರಲ್ಲಿ ಭಯ, ಆತಂಕ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಉಪ್ಪಿನ ಕೇರಿಯ ಒಂದರಿಂದ ಮೂರನೇ ಕ್ರಾಸ್ ನ ಪ್ರದೇಶವನ್ನು ಸ್ಥಳೀಯರು ತಮ್ಮಲ್ಲಿ ಇರುವ ಪ್ಲೈವುಡ್, ಮರ, ತಗಡು, ಕಲ್ಲು ಸೇರಿದಂತೆ ಹಲವಾರು ವಸ್ತುಗಳಿಂದ ತಮ್ಮ ಬಡಾವಣೆಗೆ ಬರುವ ಪ್ರಮುಖ ಪ್ರದೇಶವನ್ನು ಸೀಲ್ ಡೌನ್ ಮಾಡಿದ್ದಾರೆ.
ಹೊರಗಿನಿಂದ ಯಾವುದೇ ವ್ಯಕ್ತಿಗಳು ಬರದಂತೆ ನಿರ್ಬಂಧ ವಿಧಿಸಿದ್ದು , ಈ ನಿರ್ಬಂಧವನ್ನು ಉಲ್ಲಂಘಿಸದಂತೆ ಎಚ್ಚರಿಕೆ ವಹಿಸಿದ್ದಾರೆ, ಯಾರಾದರೂ ಅವಶ್ಯಕ ವಸ್ತುಗಳನ್ನು ತೆಗೆದುಕೊಳ್ಳಲು ಹೋಗಬೇಕಾದರೆ ದ್ವಿಚಕ್ರ ವಾಹನವನ್ನು ಬಳಸದಂತೆ ತಿಳಿಸಿದ್ದು , ಅವರು ಕಾಲ್ನಡಿಗೆಯಲ್ಲೆ ನಡೆದುಕೊಂಡು ಹೋಗಬೇಕೆಂದು ತಿಳಿಸಲಾಗಿದೆ. ಪೊಲೀಸರಿಗಿಂತ ಜನರೆ ಎತ್ತೆಚ್ಚುಕೊಂಡು ತಮ್ಮ ಏರಿಯಾವನ್ನು ಸೀಲ್ ಡೌನ್ ಮಾಡಿಕೊಂಡಿರುವ ಮೊದಲ ಘಟನೆ ಇದಾಗಿದೆ.