ಮೈಸೂರು: ಮುಡಾದಿಂದ ಒಂದು ನಿವೇಶನ ಪಡೆಯಲು ಅರ್ಜಿ ಹಾಕಿದರೆ, ಹತ್ತಾರು ವರ್ಷಗಳೇ ಕಾಯಬೇಕು. ನಿವೇಶನ ಸಿಗಬಹುದು ಇಲ್ಲವೇ ಅರ್ಜಿದಾರರ ಆಯಸ್ಸೇ ಕಳೆಯಬಹುದು. ಆದರೆ, ಅಧಿಕಾರಿಯೋರ್ವ ಮೂರು ನಿವೇಶನಗಳನ್ನು ಪಡೆದು ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದರೆ, ಮತ್ತೊಂದು ಕಡೆ ಮುಡಾ ಅಕ್ರಮವನ್ನು ಜಗಜ್ಜಾಹೀರು ಮಾಡಿದ್ದಾರೆ.
ಮೈಸೂರು ಮುಡಾದಲ್ಲಿ ಒಂದೇ ವ್ಯಕ್ತಿಗೆ ಮೂರು ನಿವೇಶನ ಮಂಜೂರು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆರ್ಟಿಐ ಕಾರ್ಯಕರ್ತ ಬಿ.ಎನ್.ನಾಗೇಂದ್ರರಿಂದ ಪ್ರಕರಣ ಬಯಲಾಗಿದೆ. ಕೇಂದ್ರ ಸರ್ಕಾರದ ಅಧಿಕಾರಿ ಎಂ.ಎನ್.ರಾಮಕೃಷ್ಣರಿಂದ ಒಂದೇ ಹೆಸರಲ್ಲಿ ಮೂರು ನಿವೇಶನ ಮಂಜೂರು ಮಾಡಿಸಿಕೊಂಡ ಅಕ್ರಮ ಬೆಳಕಿಗೆ ಬಂದಿದೆ.
ದಟ್ಟಗಳ್ಳಿ, ವಿಜಯನಗರ ಹಾಗೂ ದೇವನೂರು ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಲಾಗಿದೆ. 20x30 ವಿಸ್ತೀರ್ಣದ ಎರಡು ನಿವೇಶನಗಳು ಹಾಗೂ ಒಂದು 30x40 ವಿಸ್ತೀರ್ಣದ ನಿವೇಶನ ಮಂಜೂರಾಗಿದೆ. ಮೂರು ನಿವೇಶನಗಳ ಪೈಕಿ ಒಂದೇ ದಿನ ಎರಡು ನಿವೇಶನ ಮಂಜೂರಾಗಿದ್ದು, ಎರಡು ವರ್ಷದ ನಂತರ ಮತ್ತೊಂದು ನಿವೇಶನ ಮಂಜೂರು ಮಾಡಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.