ಮೈಸೂರು: ಕೆಆರ್ಎಸ್ನ ಹೊರಹರಿವಿನ ಪ್ರಮಾಣ ಹೆಚ್ಚಾಗಿದ್ದು, ನರಸೀಪುರದ ಹೆಮ್ಮಿಗೆ ಸೇತುವೆ ಮುಳುಗಡೆಯಾಗಲು ಒಂದು ಅಡಿ ಮಾತ್ರ ಬಾಕಿ ಇದೆ.
ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್ಎಸ್ ಜಲಾಶಯದಿಂದ ಹೆಚ್ಚಿನ ನೀರು ಹೊರಕ್ಕೆ ಬಿಡಲಾಗುತ್ತಿದೆ. ಹೀಗೆ ಹೊರಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ ತಿ.ನರಸೀಪುರದ ಹೆಮ್ಮಿಗೆ ಸೇತುವೆ ಮುಳುಗಡೆಯಾಗಲು ಇನ್ನೇನು ಕೇವಲ ಒಂದು ಅಡಿ ಮಾತ್ರ ಬಾಕಿ ಇದೆ. ಇತ್ತ ಕಾವೇರಿ ಮತ್ತು ಕಬಿನಿ ಜಲಾಶಯದ ನೀರು ಸೇರಿಕೊಂಡು ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.
ತಾಲೂಕಿನ ಮಾಲಂಗಿ ಗ್ರಾಮದ ಅಲಮೇಲಮ್ಮ ದೇವಸ್ಥಾನ ಹಾಗೂ ಧರ್ಮಚಕ್ರ ಕೂಡ ನೀರಿನಿಂದ ಮುಳುಗಿದೆ. ಒಂದು ವೇಳೆ ನರಸೀಪುರ ಮತ್ತು ತಲಕಾಡು ಗ್ರಾಮಕ್ಕೆ ರಸ್ತೆ ಕಲ್ಪಿಸುವ ಹೆಮ್ಮಿಗೆ ಸೇತುವೆ ನೀರಿನಿಂದ ಮುಳುಗಡೆಯಾದರೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗುವುದು.