ಮೈಸೂರು: ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ಗಳು ಹಾಗೂ ಸಹಕಾರಿ ಬ್ಯಾಂಕುಗಳ ಸಾಲದ ಕಂತುಗಳನ್ನು ಒತ್ತಡ ಮಾಡುತ್ತಿರುವುದರಿಂದ ಸಂಸ್ಥೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಚಿವರು, ಖಾಸಗಿ ಹಣಕಾಸು ಬ್ಯಾಂಕ್, ಸಂಸ್ಥೆಗಳಾಗಿರುವ ಬಜಾಜ್, ಟಿವಿಎಸ್ ಕ್ರೆಡಿಟ್ ಸೇರಿದಂತೆ ಇನ್ನಿತರ ಬ್ಯಾಂಕೇತರ ಹಾಗೂ ಲೇವಾದೇವಿದಾರರಿಂದ ಪಡೆದಿರುವ ಸಾಲವನ್ನು ಶೀಘ್ರ ಮರುಪಾವತಿಸುವಂತೆ ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ರೈತಾಪಿ ವರ್ಗದವರು, ವಿಕಲಚೇತನರು, ರೈತ ಕಾರ್ಮಿಕರು, ವಿಡಿಯೋಗ್ರಾಫರ್ ಹಾಗೂ ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ.

ಇಂತಹ ಸಂದರ್ಭದಲ್ಲಿ ಸಾಲದ ಕಂತುಗಳನ್ನು ಮರುಪಾವತಿಸಲು ಮಾರ್ಚ್ 2020ರಿಂದ ಜೂನ್ 2020 ಅವಧಿಗೆ ವಿಸ್ತರಿಸಲಾಗಿದೆ. ಆದಾಗ್ಯೂ ಖಾಸಗಿ ಹಣಕಾಸು ಸಂಸ್ಥೆಗಳು ಜನ ಸಾಮಾನ್ಯರಿಗೆ ಸಾಲ ಮರುಪಾವತಿ ಮಾಡಲು ನೋಟಿಸ್ ನೀಡುವುದು ಹಾಗೂ ಒತ್ತಾಯ ಮಾಡುತ್ತಿರುವುದು ತಿಳಿದು ಬಂದಿದೆ. ಜನಸಾಮಾನ್ಯರಿಗೆ ಯಾವುದೇ ರೀತಿಯ ತೊಂದರೆಯನ್ನು ಉಂಟುಮಾಡದಂತೆ ಸಂಬಂಧಪಟ್ಟ ಖಾಸಗಿ ಹಣಕಾಸು ಸಂಸ್ಥೆಗಳಿಗೆ ಕೂಡಲೇ ಸೂಕ್ತ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.