ಮೈಸೂರು: ಪೊಲೀಸರ ವಿಚಾರಣೆಗೆ ಹೆದರಿದ ಆಟೋ ಡ್ರೈವರ್ ಓರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಕನಕಗಿರಿ ನಿವಾಸಿ ಆಟೋ ಡ್ರೈವರ್ ಶಿವಕುಮಾರ್ (25) ಆತ್ಮಹತ್ಯೆಗೆ ಶರಣಾದ ಯುವಕ. ಶಿವಕುಮಾರ್ ಮೇ 28ರಂದ ಎಲೆತೋಟದ ಬಳಿ ಪಾದಚಾರಿ ಒಬ್ಬರಿಗೆ ಆಟೋದಲ್ಲಿ ಡಿಕ್ಕಿ ಹೊಡೆದು ಪರಾರಿಯಾಗಿದ್ದರು. ಅಪಘಾತದಿಂದ ಗಾಯಗೊಂಡಿದ್ದ ಗಾಯಾಳು ಆಟೋ ನಂಬರ್ ಬರೆದುಕೊಂಡು ಕೆ.ಆರ್.ಸಂಚಾರಿ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಸಂಚಾರಿ ಠಾಣಾ ಪೊಲೀಸರು, ಶಿವಕುಮಾರ್ನನ್ನು ಕರೆಸಿ ವಿಚಾರಣೆ ನಡೆಸಿ ಆಟೋ ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸರ ವಿಚಾರಣೆಯಿಂದ ಹೆದರಿದ ಶಿವಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.