ಮಂಡ್ಯ: ರೈತರ ಹೋರಾಟದ ಎಚ್ಚರಿಕೆಗೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದೆ. ನಾಳೆಯಿಂದ 10 ದಿನಗಳ ಕಾಲ ಕೆಆರ್ಎಸ್ನಿಂದ ನಾಲೆಗಳಿಗೆ ನೀರು ಹರಿಸಲು ಮುಂದಾಗಿದೆ.
ಇಂದು ನೀರು ಬಿಡಲು ತೀರ್ಮಾನ ತೆಗೆದುಕೊಂಡಿರುವ ಸರ್ಕಾರ, ರೈತರಿಗೆ ಸಿಹಿ ಸುದ್ದಿ ನೀಡಿದೆ. ನಾಳೆಯಿಂದ 10 ದಿನಗಳ ಕಾಲ ನಾಲೆಗಳಲ್ಲಿ ನೀರು ಹರಿಯಲಿದ್ದು, ಕಬ್ಬಿನ ಬೆಳೆ ರಕ್ಷಣೆ ಹಾಗೂ ಕುಡಿಯೋದಕ್ಕಾಗಿ ಕಾವೇರಿ ನೀರು ಹರಿಸಲಾಗುತ್ತದೆ ಎಂದು ಹೇಳಲಾಗಿದೆ.
ಇಂದು ಬೆಂಗಳೂರಿನಲ್ಲಿ ಸಭೆ ಸೇರಿದ ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ಶಾಸಕರು, ಸಚಿವರು ಹಾಗೂ ಕಾವೇರಿ ಉಸ್ತುವರಿ ಸಮಿತಿ ಸದಸ್ಯರು ಬೆಳೆಗಳ ರಕ್ಷಣೆ ಹಾಗೂ ಕುಡಿಯಲು ನೀರು ಬಿಡಲು ತೀರ್ಮಾನ ತೆಗೆದುಕೊಂಡಿದ್ದಾರೆ. ಇದರಿಂದ ರೈತರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಂತಾಗಿದೆ. ಕೆಆರ್ಎಸ್ನಲ್ಲಿ ನೀರಿನ ಮಟ್ಟ ನೋಡುವುದಾದರೆ, ಇಂದು ಸಂಜೆ 6 ಗಂಟೆ ವೇಳೆಗೆ 90.50 ಅಡಿ ನೀರಿದ್ದು, ಒಳ ಹರಿವು 3641 ಕ್ಯೂಸೆಕ್ ಹಾಗೂ ಹೊರ ಹರಿವು 403 ಕ್ಯೂಸೆಕ್ ಇದ್ದು, 16.239 ಟಿಎಂಸಿ ನೀರಿನ ಸಂಗ್ರಹವಿದೆ.
ರೈತರ ಹೋರಾಟಕ್ಕೆ ಮಣಿಯಿತಾ ರಾಜ್ಯ ಸರ್ಕಾರ?
ಕಳೆದ ಒಂದು ತಿಂಗಳಿಂದ ರೈತ ಸಂಘದ ಕಾರ್ಯಕರ್ತರು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಸರಣಿ ಹೋರಾಟ ಮಾಡುತ್ತಿದ್ದರು. ನಿನ್ನೆ ನಡೆದ ಸಭೆಯಲ್ಲಿ ಎರಡು ದಿನಗಳ ಗಡುವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿತ್ತು. ಹೀಗಾಗಿ ರೈತರು ಎಲ್ಲಿ ಹೋರಾಟ ಚುರುಕುಗೊಳಿಸುತ್ತಾರೋ ಎಂಬ ಭಯಕ್ಕೆ ನೀರು ಹರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇದರ ಜೊತೆಗೆ ರಾಜ್ಯ ಸರ್ಕಾರದ ಡೋಲಾಯಮಾನ ಪರಿಸ್ಥಿತಿ ಹಾಗೂ ಶಾಸಕರ ರೆಸಾರ್ಟ್ ರಾಜಕಾರಣಕ್ಕೆ ಜಿಲ್ಲೆಯ ರೈತರು ಆಕ್ರೋಶ ಹೊರ ಹಾಕಿದ್ದರು. ರೈತರನ್ನು ಮರೆತು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದರು. ಈ ಹಿನ್ನೆಯಲ್ಲಿ ರೈತರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಭಯದಲ್ಲಿ ನೀರು ಹರಿಸಲಾಗುತ್ತಿದೆ ಎಂದು ಹೇಳಲಾಗಿದೆ.