ಮಂಡ್ಯ: ಕೋವಿಡ್ ಸೋಂಕಿತರಿಗೆ ತಾಲೂಕು ಸಾರ್ವಜನಿಕ ಉಪವಿಭಾಗೀಯ ಆಸ್ಪತ್ರೆಯಲ್ಲಿ ತಿಂಡಿ, ಊಟ ಸಮರ್ಪಕವಾಗಿ ವಿತರಿಸುವ ವಿಚಾರವಾಗಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಆರೋಗ್ಯಾಧಿಕಾರಿ ಡಾ.ಅರವಿಂದ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕರು, ಕೋವಿಡ್ ವಾರ್ಡ್ನ ಸೋಂಕಿತರಿಗೆ ತಿಂಡಿ, ಊಟವನ್ನು ಸಮರ್ಪಕವಾಗಿ ವಿತರಿಸುವ ವಿಚಾರದಲ್ಲಿ ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಸೋಂಕಿತರಿಗೆ ಇಲ್ಲಸಲ್ಲದ ಸಬೂಬು ಹೇಳಿ, ಊಟದ ಬಗ್ಗೆ ಶಾಸಕರನ್ನೇ ಕೇಳುವಂತೆ ಉತ್ತರಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನಿನಗೆ ಆಸ್ಪತ್ರೆಯಲ್ಲಿ ಕೆಲಸ ಮಾಡೋದಿಕ್ಕೆ ಇಷ್ಟ ಇಲ್ಲಾ ಅಂದರೆ ಬೇರೆ ಕಡೆ ಹೋಗು. ವೈದ್ಯನಾಗಿ ರಾಜಕಾರಣ ಮಾಡಬೇಡ. ರಾಜಕಾರಣ ಮಾಡಬೇಕಾದರೆ ವೈದ್ಯರ ಹುದ್ದೆಗೆ ರಾಜೀನಾಮೆ ಕೊಟ್ಟು ನನ್ನಂತೆ ಬಿಳಿ ಬಟ್ಟೆ ಹಾಕಿಕೊಂಡು ರಾಜಕಾರಣ ಮಾಡು. ನೀನು ನನ್ನನ್ನು ಸಂಬಳಕ್ಕೆ ಇಟ್ಟುಕೊಂಡಿದ್ದೀಯಾ. ಕೋವಿಡ್ ಸೋಂಕಿತರಿಗೆ ನನ್ನ ಹೆಸರನ್ನು ಯಾಕೆ ಹೇಳುತ್ತೀಯಾ?, ನಿನ್ನ ಬಗ್ಗೆ ಎಲ್ಲಾ ಗೊತ್ತು, ಹುಷಾರ್' ಎಂದು ಪುಟ್ಟರಾಜು ಬಹಿರಂಗವಾಗಿ ಎಚ್ಚರಿಕೆ ನೀಡಿದರು.
ಕೋವಿಡ್ ವಾರ್ಡ್ನಲ್ಲಿ ಮಹಿಳೆಯರು ಹಾಗೂ ಪುರುಷರು ಒಳಗೊಂಡಂತೆ ಸೋಂಕಿತರಿಗೆ ಬಿಪಿ, ಶುಗರ್ ಕಾಯಿಲೆ ಉಳ್ಳವರು ದಾಖಲಾಗಿದ್ದಾರೆ. ಕಾಯಿಲೆ ಇರುವ ಸೋಂಕಿತರಿಗೆ ಬೆಳಗ್ಗೆ 8 ಗಂಟೆಯಷ್ಟರಲ್ಲಿ ತಿಂಡಿ ನೀಡಬೇಕು. ಆದರೆ, ಬೆಳಗ್ಗೆ 10.30 ಗಂಟೆಗೆ ತಿಂಡಿ ನೀಡಲಾಗಿದೆ. ತಡವಾಗಿ ತಿಂಡಿ ನೀಡಿದ್ದಕ್ಕೆ ಬೇಸರಗೊಂಡ ಕೋವಿಡ್ ರೋಗಿಗಳು ನೇರವಾಗಿ ಆರೋಗ್ಯಾಧಿಕಾರಿಗೆ ಫೋನ್ ಮಾಡಿ ಕೇಳಿದ್ದಾರೆ.
ಈ ವೇಳೆ ಆರೋಗ್ಯಾಧಿಕಾರಿ ಮಾತನಾಡಿ, ಇದು ನನಗೆ ಗೊತ್ತಿಲ್ಲ. ಇದೆಲ್ಲಾ ಶಾಸಕ ಸಿ.ಎಸ್. ಪುಟ್ಟರಾಜು ಅವರನ್ನೇ ಕೇಳಬೇಕು. ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಉತ್ತರಿಸಿದ್ದಾರೆ. ಪುನಃ ಸೋಂಕಿತರು ಶಾಸಕರಿಗೆ ನೇರವಾಗಿ ಫೋನ್ ಮಾಡಿ ನಡೆದ ವಿಷಯ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಪಟ್ಟಂತೆ ಶಾಸಕ ಸಿ.ಎಸ್.ಪುಟ್ಟರಾಜು ಅವರು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಹಾಗೂ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಅವರನ್ನು ಆಸ್ಪತ್ರೆಗೆ ಬರುವಂತೆ ಸೂಚಿಸಿದ್ದಾರೆ. ಶಾಸಕರು ದಿಢೀರ್ ಆಸ್ಪತ್ರೆ ಆವರಣಕ್ಕೆ ಆಗಮಿಸಿ, ಸ್ಥಳದಲ್ಲಿದ್ದ ಆರೋಗ್ಯಾಧಿಕಾರಿ ಡಾ.ಅರವಿಂದ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 2,95,041 ಜನರಿಗೆ ಸೋಂಕು; ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವು