ಮಂಡ್ಯ: ಹೋರಾಟ ಮಾಡಿದರೂ ಸರ್ಕಾರ ನೀರು ಬಿಡದ ಹಿನ್ನೆಲೆಯಲ್ಲಿ ರೈತರು ಹೊಸ ಹೋರಾಟಕ್ಕೆ ಮುಂದಾಗಿದ್ದಾರೆ. ರಾಜ್ಯಪಾಲರ ಭೇಟಿ ಹಾಗೂ ಜಿಲ್ಲೆಯಾದ್ಯಂತ ಹೋರಾಟ ತೀವ್ರಗೊಳಿಸಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ.
ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ನಾಲೆಗೆ ನೀರು ಕೊಡಿಸುವ ವಿಚಾರವಾಗಿ ಮುಂದಿನ ಚಳವಳಿಗಳ ಕುರಿತು ಚರ್ಚೆ ಮಾಡಲಾಯಿತು. ಸೋಮವಾರದಿಂದ ಜಿಲ್ಲೆಯಾದ್ಯಂತ ಪ್ರತಿಭಟನೆ, ಕಾವೇರಿ ಪ್ರಾಧಿಕಾರದ ಎದುರು ರಾಜ್ಯ ಸರ್ಕಾರ ಸ್ಥಳೀಯ ರೈತರ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸದೇ ಇರುವುದರಿಂದ ಕಾನೂನಿನ ಮೊರೆ ಹೋಗುವುದು, 500 ಜನ ರೈತರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು, ಜಿಲ್ಲಾ ಬಂದ್ಗೆ ಕರೆ ನೀಡುವುದು, ತಾಲೂಕು ಹೆದ್ದಾರಿಗಳನ್ನು ಬಂದ್ ಮಾಡುವುದು, ಗ್ರಾಮ ಪಂಚಾಯತ್ ಬಂದ್ ಮಾಡುವುದು ಈ ಎಲ್ಲ ವಿಷಯಗಳ ಕುರಿತು ಸಭೆಯಲ್ಲಿ ನಿರ್ಧರಿಸಲಾಗಿದೆ.
ಪ್ರಗತಿಪರ ಸಂಘಟನೆಗಳು, ಆಟೋ ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ವರ್ತಕರ ಸಂಘ, ಹೋಟೆಲ್ ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರ ಸಂಘ ಸೇರಿದಂತೆ ಎಲ್ಲಾ ಸಂಘಟನೆಗಳ ಬೆಂಬಲ ಪಡೆದು ಹೋರಾಟಕ್ಕಿಳಿಯಲು ರೈತ ಸಂಘದವರು ತೀರ್ಮಾನಿಸಿದ್ದಾರೆ.