ಕೊಪ್ಪಳ: ಮಳೆ ಪ್ರಾರಂಭವಾಗಿದ್ದರೂ ಜಿಲ್ಲೆಯಲ್ಲಿ ಬೇಸಿಗೆಯ ತಾಪ ತಗ್ಗಿಲ್ಲ.ಜಲಮೂಲಗಳೆಲ್ಲಾ ಬಹುತೇಕ ಬತ್ತಿಹೋಗಿದ್ದು, ಕುಡಿಯುವ ನೀರಿಗಾಗಿ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೊಪ್ಪಳ, ಯಲಬುರ್ಗಾ, ಕುಕನೂರು ಸೇರಿದಂತೆ ಜಿಲ್ಲೆಯ ಇನ್ನಿತರೆ ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಜನ ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಅದ್ರಲ್ಲೂ ಕೊಪ್ಪಳದ ಕಟ್ಟಕಡೆಯ ಗ್ರಾಮವಾಗಿರುವ ಗುಡಗೇರಿಯಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಆ ಗ್ರಾಮದಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ಕೃಷಿಹೊಂಡದಲ್ಲಿ ಸಂಗ್ರಹವಾಗಿರುವ ನೀರೇ, ಗುಡಗೇರಿ ಗ್ರಾಮದ ಜನರ ದಾಹ ನೀಗಿಸುತ್ತಿದೆ.
ಎತ್ತಿನಬಂಡಿ, ಬೈಕ್, ಸೈಕಲ್ ಹಾಗೂ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ನೀರು ತರುವುದು ಅನಿವಾರ್ಯವಾಗಿದೆ. ವಾಹನಗಳಿದ್ದವರು ಹೇಗೋ ಇಷ್ಟು ದೂರ ಸಾಗಿ ನೀರು ತೆಗೆದುಕೊಂಡು ಹೋಗುತ್ತಾರೆ. ಆದರೆ, ವಾಹನ ಸೌಲಭ್ಯ ಇಲ್ಲದವರು ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರಾದಿಯಾಗಿ ಈ ಕೃಷಿಹೊಂಡಕ್ಕೆ ಬಂದು ಕುಡಿಯಲು ನೀರು ತರುವ ಪಾಡು ಹೇಳತೀರದು.
ಇದೇ ರೀತಿಯಲ್ಲಿ ಕುಕನೂರು, ಯಲಬುರ್ಗಾ, ಕುಷ್ಟಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿಯೂ ನೀರಿಗಾಗಿ ತತ್ವಾರವಿದೆ. ಗ್ರಾಮೀಣ ಭಾಗದಲ್ಲಿ ನೀರಿನ ಘಟಕಗಳಿದ್ದರೂ,ಅವೂ ಕೆಟ್ಟು ಕೆಲಸಕ್ಕೆ ಬಾರದಂತಾಗಿವೆ.
ಕುಕನೂರು ತಾಲೂಕಿನ ಬಿನ್ನಾಳ, ಸೋಂಪುರ, ಸಿದ್ನೇಕೊಪ್ಪ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಸಮಸ್ಯೆ ಬಿಗಡಾಯಿಸಿದ್ದು,ನೀರಿಗಾಗಿ ಪಕ್ಕದ ಚಿಕ್ಕೇನಕೊಪ್ಪ ಗ್ರಾಮದ ಕೆರೆಗೆ ಹೋಗಬೇಕಿದೆ.
ಪ್ರತಿ ಬಾರಿಯೂ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದರೆ, ಅದಕ್ಕೆ ಶಾಶ್ವತವಾಗಿ ಪರಿಹಾರ ಕಲ್ಪಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಈ ಬಗ್ಗೆ ಕೆಲಸ ಮಾಡುವುದಿಲ್ಲ ಎಂದು ಬಿನ್ನಾಳ ಗ್ರಾಮದ ಜಗದೀಶ್ ಚಟ್ಟಿ ಅಸಮಾಧಾನ ತೋಡಿಕೊಂಡರು.