ಕೊಪ್ಪಳ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಕೈ ಶಾಸಕ ಅಮರೇಗೌಡ ಪಾಟೀಲ್ ಭಯ್ಯಾಪುರ ಹೇಳಿದ್ದಾರೆ.
ಕುಷ್ಟಗಿಯಲ್ಲಿ ಮಾತನಾಡಿರುವ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿರೋಧ ಪಕ್ಷದವರನ್ನು ಗುರಿಯಾಗಿಸಿಕೊಂಡು ಇಂತಹ ದಾಳಿ ಮಾಡಿಸಲಾಗುತ್ತಿದೆ. ಬಿಜೆಪಿಯಲ್ಲಿಯೂ ಸಹ ಇಂತಹ ವ್ಯವಹಾರ ಮಾಡುವವರು ಇರಬಹುದು. ಆದರೆ, ತಮ್ಮ ಪಕ್ಷದ ಒಬ್ಬ ನಾಯಕರ ಮೇಲೂ ದಾಳಿಯಾಗಿಲ್ಲ. ಯಾವುದೇ ಆಡಳಿತ ಪಕ್ಷದ ಸರ್ಕಾರ ಇರುವಾಗ ಅವರು ಹೇಳಿದ ಹಾಗೆ ಅಧಿಕಾರಿಗಳು ಕುಣಿಯುವ ಕೆಲಸವಾಗಬಾರದು. ಆಡಳಿತ ಪಕ್ಷದ ಕೈಗೊಂಬೆಯಾಗಿ ಸರ್ಕಾರಿ ಇಲಾಖೆಗಳು ಕೆಲಸ ಮಾಡಬಾರದು. ಕಾನೂನು ಚೌಕಟ್ಟನ್ನು ಮೀರಿ ಬಿಜೆಪಿ ಸರ್ಕಾರ ನಮ್ಮ ಪಕ್ಷದ ನಾಯಕರನ್ನು ಬಂಧಿಸುತ್ತಿದೆ ಎಂದರು.
ಇನ್ನು ಡಿಕೆಶಿ ಬಂಧನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ರಾಜಕೀಯ ಪಿತೂರಿ ಮಾಡುತ್ತಿದ್ದಾರೆ. ಇಂತಹ ಹೇಳಿಕೆ ಮೂಲಕ ತಮ್ಮ ಪಕ್ಷದ ಸಣ್ಣತನ ತೋರಿಸುತ್ತಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಹಾಗೆ ಮಾಡೋದಿದ್ರೆ ಅವರ ಆಡಳಿತದಲ್ಲೇ ಮಾಡುತ್ತಿದ್ದರು. ಡಿಕೆಶಿ ಬಂಧನಕ್ಕೂ, ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ. ಇನ್ನು ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರಷ್ಟೇ ಹೋರಾಟ ಮಾಡಿಲ್ಲ. ಎಲ್ಲಾ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಆ ಭಾಗದಲ್ಲಿ ಒಕ್ಕಲಿಗರ ಸಂಖ್ಯೆ ಜಾಸ್ತಿ ಇರುವುದರಿಂದ ಒಕ್ಕಲಿಗರು ಜಾಸ್ತಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಅಷ್ಟೇ ಎಂದು ಅಮರೇಗೌಡ ಪಾಟೀಲ್ ಹೇಳಿದರು.