ಕೊಡಗು : ಜಿಲ್ಲೆಯ ಹಲವೆಡೆ ಮಳೆಗಾಲ ಶುರುವಾಗುತ್ತಿದ್ದಂತೆ ಜನರು ಆತಂಕದಲ್ಲೇ ಕಾಲ ಕಳೆಯುವ ಸ್ಥಿತಿ ಇದೆ. ಅದರಲ್ಲೂ ಗುಡ್ಡಗಾಡು ಪ್ರದೇಶ ಮಡಿಕೇರಿ ನಗರದ ಆರು ಬಡಾವಣೆಗಳು ಅಪಾಯದಲ್ಲಿವೆ ಎಂದು ನಗರಸಭೆ ಮಾಹಿತಿ ನೀಡಿರುವುದು ಜನರು ಮತ್ತೆ ಕಂಗಾಲಾಗುವಂತಾಗಿದೆ.
ಮಡಿಕೇರಿಯಲ್ಲಿ ಕಳೆದ ಕೆಲ ವರ್ಷಗಳಿಂದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸುತ್ತಲೇ ಇದೆ. ಕಳೆದ ಮೂರು ವರ್ಷಗಳ ಅನುಭವವಂತೂ ಬಹಳ ಆತಂಕಕಾರಿಯಾಗಿದೆ. ಪ್ರಮುಖವಾಗಿ ಮಡಿಕೇರಿಯ ಚಾಮುಂಡೇಶ್ವರಿನಗರ ತುಂಬಾ ಅಪಾಯಕಾರಿಯಾಗಿದೆ. ಈ ಪ್ರದೇಶವು ರಾಜಾಸೀಟಿನ ಪಕ್ಕದ ಕಡಿದಾದ ಗುಡ್ಡದಲ್ಲಿದೆ. 2018ರ ಮಹಾಪ್ರಳಯದಲ್ಲಿ ಇಲ್ಲಿನ 100ಕ್ಕೂ ಅಧಿಕ ಮನೆಗಳು ಧರೆಗುರುಳಿದ್ದವು.
ಈ ವರ್ಷವೂ ಮಳೆ ಅತಿಯಾದರೆ ಮಡಿಕೇರಿಯ ಚಾಮುಂಡೇಶ್ವರಿನಗರ, ಇಂದಿರಾನಗರ, ಮಂಗಳಾದೇವಿನಗರ ಸೇರಿ ಆರು ಪ್ರದೇಶಗಳಲ್ಲಿ ಭೂಕುಸಿತವಾಗುವ ಅಪಾಯವಿದೆ. ಹಾಗಾಗಿ, ಮಡಿಕೇರಿ ನಗರಸಭೆ ಈಗಾಗಲೇ ಗುಡ್ಡಗಾಡು ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟಿಸ್ ನೀಡಲು ತೀರ್ಮಾನಿಸಿದೆ.
ಮುಗಿಯದ ಸಂಕಷ್ಟ : ಅವಘಡ ಮುನ್ಸೂಚನೆ ಹಿನ್ನೆಲೆಯಲ್ಲಿ ನಗರಸಭೆಯೇನೋ ನೋಟಿಸ್ ನೀಡಲಿದೆ. ಆದರೆ, ಇಲ್ಲಿನ ಗುಡ್ಡಗಾಡು ನಿವಾಸಿಗಳ ಸಂಕಷ್ಟಕ್ಕೆ ಕೊನೆಯೇ ಇಲ್ಲದಾಗಿದೆ. ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಸಿಕ್ಕಿದೆ. ಆದರೆ, ಅಪಾಯಕಾರಿ ಪ್ರದೇಶದಲ್ಲಿ ಇದ್ದವರಿಗೆ ಮಾತ್ರ ಇನ್ನೂ ಮನೆ ಮರೀಚಿಕೆಯಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಅತಂತ್ರರಾಗಿ ಮನೆ ಬಿಟ್ಟು ಓಡಿ ಹೋಗಿ ಎಲ್ಲಿಯೋ ಬದುಕುವುದು ಬಳಿಕ ಮತ್ತೆ ಮನೆಗೆ ಮರಳುವುದು ಇಲ್ಲಿನ ಜನರ ಪಾಡಾಗಿದೆ. ತಮಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಭೂಕುಸಿತ, ಪ್ರವಾಹ ಸಂಕಷ್ಟದಿಂದ ತಮಗೆ ಮುಕ್ತಿ ಸಿಗಬೇಕೆಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.