ಕೊಡಗು: ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್ ಜಿಲ್ಲಾ ಕಳ್ಳರನ್ನು ಜಿಲ್ಲಾ ಪೊಲೀಸರು ಬಂಧಿಸಿ, ಬಂಧಿತರಿಂದ 2,50,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಮನಗರದ ಪ್ರವೀಣ್ (25), ಹಾಸನದ ಗಣೇಶ್ (30), ಮೈಸೂರಿನ ಕುಮಾರ(33) ಹಾಗೂ ಅಭಿಷೇಕ್ (23) ಬಂಧಿತ ಆರೋಪಿಗಳು. ಜೂನ್ 17ರಂದು ಹೆಬ್ಬಾಲೆ ಪೆಟ್ರೋಲ್ ಬಂಕ್ ದರೋಡೆ ಪ್ರಕರಣವನ್ನು ಬೆನ್ನತ್ತಿದ್ದಾಗ ರಾಜ್ಯದ 5 ಜಿಲ್ಲೆಗಳಲ್ಲಿನ 10 ಪ್ರಕರಣಗಳು ಬೆಳಕಿಗೆ ಬಂದಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನೆ ನಡೆದ 13 ದಿನಗಳೊಳಗೆ ಖದೀಮರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ಇನ್ನು ಆರೋಪಿಗಳಿಂದ 2 ಬೈಕ್, 2 ಲಾಂಗ್, 10ಕ್ಕೂ ಅಧಿಕ ಮೊಬೈಲ್ ಮತ್ತು ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ತಂಡ ಒಂಟಿ ಮನೆ ಹಾಗೂ ಪೆಟ್ರೋಲ್ ಬಂಕ್ಗಳನ್ನು ಗುರಿಯಾಗಿಸಿಕೊಂಡು ದರೋಡೆ ನಡೆಸುತ್ತಿತ್ತು. ಅಲ್ಲದೆ ಕೊಡಗು ಸೇರಿದಂತೆ ರಾಮನಗರ, ಮಂಡ್ಯ, ಮೈಸೂರು ಹಾಗೂ ಹಾಸನದಲ್ಲಿ ಇವರ ಮೇಲೆ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಬಂಧಿತ ಪ್ರವೀಣ್ ಮೇಲೆ ಶನಿವಾರ ಸಂತೆ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣವಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ತನಿಖಾ ತಂಡಕ್ಕೆ ಕೊಡಗು ಎಸ್ಪಿ ಸುಮನ್ ಡಿ. ಪನ್ನೇಕರ್ ನಗದು ಬಹುಮಾನ ಘೋಷಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಕಳೆದ ಜೂನ್ 17ರಂದು ಹೆಬ್ಬಾಲೆ ಪೆಟ್ರೋಲ್ ಬಂಕ್ನಲ್ಲಿ ಖದೀಮರ ತಂಡವೊಂದು ಲಾಂಗ್ ತೋರಿಸಿ ಹಲ್ಲೆ ಮಾಡಿ ಹಣ, ಮೊಬೈಲ್ ದೋಚಿ ಪರಾರಿಯಾಗಿತ್ತು. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 394, 427ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ನೇತೃತ್ವದಲ್ಲಿ ಸ್ಥಳದಲ್ಲಿನ ಸಿಸಿಟಿವಿ, ಫಿಂಗರ್ ಪ್ರಿಂಟ್ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಖದೀಮರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.