ಕಲಬುರಗಿ: ಸುರಿಯುತ್ತಿರುವ ಮಳೆಯಲ್ಲಿಯೇ ಮಕ್ಕಳದು ಒಂದೇ ಆಗ್ರಹ, ಪಟ್ಟು ಹಿಡಿದು ಶಿಕ್ಷಕರನ್ನು ಬಯಲಲ್ಲೇ ಸುತ್ತಿವರಿದ ವಿದ್ಯಾರ್ಥಿಗಳು ದಂಡು. ಪ್ಲೀಸ್... ನಮ್ಮನ್ನು ಬಿಟ್ಟು ಹೋಗಬೇಡಿ ಅನ್ನೋ ಒಂದೇ ಅಳಲು.
ಹೌದು.., ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಹೊರವಲಯದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಿದ್ಯಾರ್ಥಿನಿಯರ ವಸತಿ ನಿಲಯದ ಪ್ರಾಂಶುಪಾಲರ ವರ್ಗಾವಣೆ ಸುದ್ದಿ ವಿದ್ಯಾರ್ಥಿಗಳ ಕಿವಿಗೆ ಬೀಳುತ್ತಿದ್ದಂತೆ, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು.
ಸ್ವತಃ ಪ್ರಾಂಶುಪಾಲರಾದ ರಾಜಶೇಖರ ಮಾಂಗ ಹೋಗುವುದಿಲ್ಲ ಎಂದು ಹೇಳಿದರೂ ಮಕ್ಕಳು ಹಿಂದೆ ಸರಿಯಲಿಲ್ಲ. ನೀವು ಭಾಷೆ ಕೊಡಿ ಎಂದು ಪಟ್ಟು ಹಿಡಿದರು. ಈ ಮನಮಿಡಿಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.
ಮಕ್ಕಳ ಗೋಳಾಟ ನೋಡಿದ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು, ಪ್ರಾಂಶುಪಾಲರು ವರ್ಗವಾಗದಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ಒತ್ತಡ ಹೇರಿ ಆದೇಶ ತರುವುದಾಗಿ ಭರವಸೆ ನೀಡಿದ್ದಾರೆ.