ಹಾವೇರಿ : ತಾನೂ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಾನೂ ಸಹ ಮೂರು ಬಾರಿ ಶಾಸಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಪಕ್ಷದಲ್ಲೂ ಸಂಘಟನೆ ಮಾಡಿದ್ದೇನೆ, ಚಲವಾದಿ ಸಮುದಾಯಕ್ಕೆ ಸೇರಿದವನಾಗಿದ್ದೇನೆ. ಹಿಂದಿನಿಂದಲೂ ನಮ್ಮ ಸರಕಾರದಲ್ಲಿ ಚಲವಾದಿ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ.
ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿಗೆ ಬಂದಾಗ ಗಮನಕ್ಕೆ ತಂದಿದ್ದೆ. ಮುಂದಿನ ಬಾರಿ ನಿನಗೆ ಅವಕಾಶ ಮಾಡಿಕೊಡುತ್ತೇನೆ ಎಂಬ ಭರವಸೆ ನೀಡಿದ್ದರು. ಈ ಬಾರಿ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ. ಅವಕಾಶ ಸಿಕ್ಕರೆ ಉತ್ತಮವಾಗಿ ಕೆಲಸ ನಿರ್ವಹಿಸಿ ಸರ್ಕಾರಕ್ಕೆ ಉತ್ತಮ ಹೆಸರು ಬರುವಂತೆ ಕೆಲಸ ಮಾಡುತ್ತೇನೆ ಎಂದರು.
ಈ ಬಾರಿ ನನಗೂ ಅವಕಾಶ ಸಿಗುತ್ತದೆ. ಭರವಸೆ ಕೊಟ್ಟಂತೆ ಈ ಬಾರಿ ಈಡೇರುತ್ತದೆ ಎಂಬ ವಿಶ್ವಾಸವಿದೆ. ಗುಜರಾತ್ ಮಾದರಿಯಲ್ಲಿ ಸಂಪುಟ ವಿಸ್ತರಣೆ ಮಾಡಬೇಕು ಅನ್ನೋ ಚಿಂತನೆ ಹೈಕಮಾಂಡ್ನಲ್ಲಿದೆ. ಎಲ್ಲರಿಗೂ ಅವಕಾಶ ಸಿಗಲಿ ಅಂತಾ ಆ ರೀತಿ ಮಾಡಿದ್ದಾರೆ.
ಇಲ್ಲೂ ಸಹ ಆ ರೀತಿ ಮಾಡಿದರೆ ಚಿಂತೆ ಇಲ್ಲ. ಹಿರಿಯರಿಗೆ ಸಂಘಟನೆ ಮಾಡಲು ಅವಕಾಶ ಕೊಟ್ಟು, ಉಳಿದವರಿಗೆ ಅವಕಾಶ ಕೊಟ್ಟರೆ ತಪ್ಪೇನಲ್ಲ ಎಂದು ನೆಹರು ಓಲೇಕಾರ್ ತಿಳಿಸಿದರು. ಹೈಕಮಾಂಡ್ನಿಂದ ಸೂಚನೆ ಬಂದ ಕೂಡಲೇ ಸಿಎಂ ಅದನ್ನ ಜವಾಬ್ದಾರಿಯಿಂದ ಮಾಡುತ್ತಾರೆ ಎಂಬ ವಿಶ್ವಾಸವಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬಿ ಸಿ ಪಾಟೀಲ್ರಿಗೆ ಸಿಗುತ್ತದೆ ಅಂತಾ ಭಾವಿಸಿದ್ದೆವು. ಆದರೆ, ಶಿವರಾಮ ಹೆಬ್ಬಾರರಿಗೆ ಸಿಕ್ಕಿದೆ. ಹೆಬ್ಬಾರರೂ ಉತ್ತಮ ಕೆಲಸಗಾರರು. ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗಾಗಿ ನಾವೆಲ್ಲ ಅವರಿಗೆ ಸಹಕಾರ ಕೊಡುತ್ತೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಲ್ಲಿ ಸಚಿವ ಸ್ಥಾನ ಸಿಗದವರು ಕಾಂಗ್ರೆಸ್ಗೆ ಬರ್ತಾರೆ ಅಂತಾ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಯಾರೂ ಆ ರೀತಿ ಹೋಗೋದಿಲ್ಲ. ಇಲ್ಲಿ ಬಂದು ಒಂದು ಚುನಾವಣೆ ಎದುರಿಸಿ ಗೆದ್ದು ಕೆಲಸವನ್ನ ಮಾಡಿದ್ದಾರೆ.
ಹೀಗಾಗಿ, ಅವರಾರು ಬಿಟ್ಟು ಹೋಗೋ ಪ್ರಮೇಯ ಉದ್ಭವಿಸಲ್ಲ. ವಿಸ್ತರಣೆ ಅಥವಾ ಪುನಾರಚನೆ ವೇಳೆ ಕೆಲವರನ್ನ ಕೈಬಿಡಬಹುದು. ಕೈಬಿಟ್ಟವರಿಗೆ ಮುಂದೆ ಮತ್ತೆ ಅವಕಾಶಗಳು ಸಿಗುತ್ತವೆ ಎಂದು ಶಾಸಕ ನೆಹರು ಓಲೇಕಾರ್ ಅಭಿಪ್ರಾಯಪಟ್ಟರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ