ಗದಗ: ಹಬ್ಬಗಳು ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ತನ್ನದೇ ಆದ ಮಹತ್ವ ಪಡೆದಿವೆ. ಅದರಲ್ಲೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯ ಎಲ್ಲೆಡೆ ಕಳೆಗಟ್ಟುತ್ತೆ. ಆದರೆ ಈ ಬಾರಿ ಕೊರೊನಾ ಎಫೆಕ್ಟ್ನಿಂದಾಗಿ ಪಂಚಮಿ ಹಬ್ಬ ಕಳೆಗುಂದಿದೆ. ಮನೆ ಮನೆಯಲ್ಲೂ ವಿಜೃಂಭಿಸಬೇಕಾದ ರೊಟ್ಟಿ ಪಂಚಮಿ ಸಪ್ಪಗಾಗಿದೆ.
ಮುದ್ರಣ ಕಾಶಿಯಲ್ಲಿ ಪಂಚಮಿಯ ಮುನ್ನಾ ದಿನವಾದ ಇಂದು ರೊಟ್ಟಿ ಪಂಚಮಿ ಆಚರಿಸುವುದು ರೂಢಿ. ಉತ್ತರ ಕರ್ನಾಟಕದ ಪ್ರಸಿದ್ಧ ಭಕ್ಷ್ಯ ಭೋಜನಗಳಾದ ಎಳ್ಳು ರೊಟ್ಟಿ, ಚಪಾತಿ, ಕಡ್ಲಿಕಾಳು ಪಲ್ಯ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಶೇಂಗಾ, ಅಗಸಿ, ಗುರಳ್ಳು, ಪುಟಾಣಿ ಚಟ್ನಿ ಸೇರಿದಂತೆ ಚಿತ್ರಾನ್ನ, ಮೊಸರನ್ನ, ಅಕ್ಕಿ ಹುಗ್ಗಿ.. ಹೀಗೆ ತರಹೇವಾರಿ ಖಾದ್ಯಗಳನ್ನು ಈ ಸಂದರ್ಭದಲ್ಲಿ ತಯಾರಿಸಲಾಗುತ್ತದೆ.
ಈ ಭಕ್ಷ್ಯ ಭೋಜ್ಯಗಳನ್ನು ನಂತರ ತಮ್ಮ ಬಂಧು ಬಳಗ, ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡು ತಿನ್ನುವುದೇ ರೊಟ್ಟಿ ಪಂಚಮಿ ವೈಶಿಷ್ಟ್ಯತೆ. ಆದರೆ ಈ ಬಾರಿ ಕೊರೊನಾ ಆತಂಕದಿಂದ ಜನರು ಯಾರ ಮನೆಗೂ ಹೋಗದೇ ತಮ್ಮ ತಮ್ಮ ಮನೆಗಳಲ್ಲಷ್ಟೇ ಕುಟುಂಬ ಸದಸ್ಯರೊಂದಿಗೆ ಕೂಡಿಕೊಂಡು ಊಟ ಸವಿದರು.
ಐದು ದಿನಗಳ ಕಾಲ ನಡೆಯುವ ಪಂಚಮಿ ಹಬ್ಬದ ಮೊದಲ ದಿನವೇ ರೊಟ್ಟಿ ಪಂಚಮಿ. 2 ನೇ ದಿನ ನಾಗರ ಮೂರ್ತಿಗೆ ಹಾಲೆರೆಯುವುದು ಹಾಗೂ 3ನೇ ದಿನ ಚವತಿ ಹಬ್ಬ ಆಚರಿಸಲಾಗುತ್ತೆ. ಮನೆ ಮಂದಿಯೆಲ್ಲಾ ಜಮಾಯಿಸಿ ಹಬ್ಬವನ್ನು ಆಚರಣೆ ಮಾಡುವುದರಿಂದ ಒಡಹುಟ್ಟಿದವರ ಹಬ್ಬ ಅನ್ನೋ ಪ್ರತೀತಿಯೂ ಇದಕ್ಕಿದೆ. ಗಂಡನ ಮನೆಯಲ್ಲಿರೋ ಮಗಳು ತವರು ಮನೆಗೆ ಬಂದು ಈ ಹಬ್ಬದಲ್ಲಿ ಪಾಲ್ಗೊಳ್ಳುವುದು ಸಂಪ್ರದಾಯ. ಆದರೆ ಈ ಸಲದ ಕೊರೊನಾ ನಿಯಮಗಳು ಈ ಎಲ್ಲ ಸಡಗರಕ್ಕೂ ಲಾಕ್ಡೌನ್ ತಂದಿಟ್ಟಿವೆ.