ದಾವಣಗೆರೆ: ಕಳೆದ ಹತ್ತು ದಿನಗಳಿಂದ ಉಕ್ಕಿ ಹರಿಯುತ್ತಿದ್ದ ತುಂಗಾಭದ್ರಾ ನದಿ ಶಾಂತವಾಗಿದ್ದು, ಹೊನ್ನಾಳಿ, ಹರಿಹರ ತಾಲೂಕಿನ ನದಿ ಪಾತ್ರದ ಜನರು ಸ್ವಲ್ಪಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಜಿಲ್ಲೆಯಲ್ಲಿಯೂ ಕಳೆದ ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟ ಇಲ್ಲ. ತುಂಗಾ ಅಣೆಕಟ್ಟಿನಿಂದ ಬಿಡುತ್ತಿರುವ ನೀರಿನ ಪ್ರಮಾಣವೂ ಕಡಿಮೆಯಾಗಿದ್ದು, ಪ್ರವಾಹ ಭೀತಿ ಸದ್ಯಕ್ಕೆ ದೂರವಾಗಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಪರಿಹಾರ ಕೇಂದ್ರಗಳಲ್ಲಿ ವಾಸವಾಗಿರುವ ಜನರು ಅಲ್ಲಿಯೇ ದಿನ ನೂಕುತ್ತಿದ್ದಾರೆ.
ಮಲೆನಾಡು ಭಾಗದಲ್ಲಿಯೂ ಮಳೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಹೀಗಾಗಿ, ಪ್ರವಾಹವೂ ದಿನೇ ದಿನೆ ಕಡಿಮೆಯಾಗುತ್ತಿದೆ. ನ್ಯಾಮತಿ, ಹೊನ್ನಾಳಿ, ಹರಿಹರ ತಾಲೂಕಿನ ನದಿ ಪಾತ್ರದ ಜನರು ಪ್ರವಾಹ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದರು. ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿಯೂ ನೀರಿನ ಪ್ರಮಾಣ ಕೊಂಚ ಕಡಿಮೆಯಾಗಿದೆ. ನದಿ ಪಾತ್ರದ ಅಕ್ಕಪಕ್ಕದ ಅಡಿಕೆ ತೋಟ, ತೆಂಗಿನ ತೋಟ, ಭತ್ತದ ಗದ್ದೆಗಳಿಗೆ ನುಗ್ಗಿದ್ದ ನೀರು ಸ್ವಲ್ಪ ಇಳಿಮುಖ ಕಂಡಿದೆ.
ಇನ್ನು ಹರಿಹರ ಪಟ್ಟಣದ ಗಂಗಾನಗರದ 20ಕ್ಕೂ ಹೆಚ್ಚು ಕುಟುಂಬಗಳು ಎಪಿಎಂಸಿ ಕೇಂದ್ರದಲ್ಲಿ ತೆರೆದಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಆದ್ರೆ, ಹೊನ್ನಾಳಿ ಪಟ್ಟಣದಲ್ಲಿ ಕೆಲ ಮನೆಗಳಿಗೂ ನೀರು ನುಗ್ಗಿತ್ತು. ಈಗ ಇಲ್ಲಿಯೂ ನೀರು ಇಳಿಕೆ ಕಂಡಿದೆ. ಹೊನ್ನಾಳಿ ತಾಲೂಕಿನಲ್ಲಿ 9 ಕಚ್ಚಾ ಮನೆಗಳು ಹಾನಿಗೀಡಾಗಿದ್ದು, ಸುಮಾರು 47 ಸಾವಿರ ರೂಪಾಯಿ ಹಾನಿ ಸಂಭವಿಸಿದೆ.
ಇನ್ನು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತುಂಗಾಭದ್ರಾ ನದಿ ಪಾತ್ರದಲ್ಲಿ ನೀರು ಇಳಿಮುಖವಾಗಿದ್ದು, ಜಾಕ್ವೆಲ್ ಪುನರ್ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪಟ್ಟಣಕ್ಕೆ ನೀರು ಪೂರೈಸುವ ಜಾಕ್ವೆಲ್ ಆರಂಭವಾಗಲಿದ್ದು, ಕಣಿವೆ, ಹಲುವಾಗಲು, ಗರ್ಭಗುಡಿ, ನಂದ್ಯಾಲ, ನಿಟ್ಟೂರು ರಸ್ತೆಗಳಲ್ಲಿಯೂ ನೀರಿನ ಹರಿಯುವಿಕೆಯಲ್ಲಿ ಇಳಿಕೆಯಾಗಿದೆ.
ಮತ್ತೆ ಮಳೆ ಶುರುವಾದರೆ ಸಮಸ್ಯೆ ತಲೆದೋರಬಹುದು ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ನದಿ ಪಾತ್ರದ ಜನರಿಗೆ ಮತ್ತೆ ಅಲ್ಲಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ನದಿ ಪಾತ್ರದಲ್ಲಿ ಜನರು ಸಂಚರಿಸಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.