ದಾವಣಗೆರೆ : ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರಿಗೆ ಕೊರೊನಾ ಸೋಂಕು ತಗುಲಿದೆ. ಇಲ್ಲಿ ಹಗಲಿರುಳು ದುಡಿಯುತ್ತಿರುವ ಗುತ್ತಿಗೆ ನೌಕರರ ಬದುಕು ಕಠಿಣವಾಗಿದೆ. ಒಂದೆಡೆ ಕೆಲಸದ ಭದ್ರತೆ ಇಲ್ಲ, ಮತ್ತೊಂದೆಡೆ ಸರಿಯಾಗಿ ಸಂಬಳವೂ ಸಿಗುತ್ತಿಲ್ಲ. ಇದು ನೌಕರರಲ್ಲಿ ಆತಂಕ ಹೆಚ್ಚಿಸಿದೆ.
ಆಸ್ಪತ್ರೆಯಲ್ಲಿ ಸುಮಾರು 250ಕ್ಕೂ ಅಧಿಕ ಮಂದಿ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಒಬ್ಬ ವೈದ್ಯ. ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು, ನಾಲ್ವರು ನರ್ಸ್, ಮೂವರು ಡಿ ಗ್ರೂಪ್ ನೌಕರರಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕು ಬಂದಿರುವ ಡಿ ಗ್ರೂಪ್ ನೌಕರರ ಮನೆಯ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇದು ಕೇವಲ ಪರಿಸ್ಥಿತಿ ಅಷ್ಟೇ ಅಲ್ಲ, ಇಲ್ಲಿ ಕೆಲಸ ಮಾಡುತ್ತಿರುವವರ ಬಹುತೇಕರ ಪರಿಸ್ಥಿತಿ ಇದೇ ಆಗಿದೆ.
ಸುಮಾರು 10-15 ವರ್ಷಗಳಿಂದ ಇದೇ ಕೆಲಸವನ್ನು ನಂಬಿ ಬದುಕುತ್ತಿರುವ ಗುತ್ತಿಗೆ ನೌಕರರು ಕೆಲಸಕ್ಕೆ ಎಲ್ಲಿ ಕುತ್ತು ಬರತ್ತೋ ಎಂಬ ಭಯ ಹೆಚ್ಚಾಗಿದೆ. ಗುತ್ತಿಗೆದಾರರು ಬದಲಾದಂತೆ ನೌಕರರನ್ನು ಬದಲಾಯಿಸುವ ಸಾಧ್ಯತೆ ಹೆಚ್ಚಿರುವುದು ಈ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಪ್ರಪಂಚದಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗ ಹರಡಿದೆ. ಜೀವ ಭಯ ತೊರೆದು ಸರ್ಕಾರದ ಆದೇಶದಂತೆ ನಿರಂತರವಾಗಿ ಕರ್ತವ್ಯ ನಿರ್ವಹಿಸಿದ್ದೇವೆ. ಈಗಲಾದರೂ ಕಷ್ಟ ಅರಿತು ಸರ್ಕಾರ ಗುತ್ತಿಗೆ ನೌಕರರ ಸೇವೆ ಖಾಯಂಗೊಳಿಸಬೇಕು. ಈ ಮೂಲಕ ಸೇವಾ ಭದ್ರತೆ ಒದಗಿಸಬೇಕು ಎಂದು ಸರ್ಕಾರಿ ಚಿಗಟೇರಿ ಜಿಲ್ಲಾಸ್ಪತ್ರೆಯ ದಿನಗೂಲಿ ನೌಕರರ ಡಿ ಗ್ರೂಪ್ ಸಂಘ ಆಗ್ರಹಿಸಿದೆ.