ದಾವಣಗೆರೆ: ರೇಣುಕಾಚಾರ್ಯ ನಿಜವಾಗಿಯೂ ಹೋರಿಯೇ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು. ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಮಾತನಾಡಿದ ಅವರು, ಹೊನ್ನಾಳಿ ಮತದಾರರ ಆಶೀರ್ವಾದ ರೇಣುಕಾಚಾರ್ಯರ ಮೇಲಿದೆ. ಆದ್ದರಿಂದ ಅವರ ಮೇಲೆ ಹೋರಿ ಹಾರಿದರೂ ಏನು ಆಗಲಿಲ್ಲ ಎಂದರು. ರಾಜ್ಯದಲ್ಲಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಲ್ಲಿರುವ ರೇಣುಕಾಚಾರ್ಯ, ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಾರೆ. ಆದ್ದರಿಂದ ಅವರನ್ನು ಮತದಾರರು ಸತತವಾಗಿ ಆರಿಸಿ ಕಳುಹಿಸುತ್ತಿದ್ದಾರೆ ಎಂದರು.
ರೇಣುಕಾಚಾರ್ಯ ನನ್ನ ಆಫೀಸ್ಗೆ ಬಂದ್ರೆ ಭಯವಾಗುತ್ತೆ. ಯಾಕೆಂದ್ರೆ ಬೇರೆ ಶಾಸಕರು ನನ್ನ ಕಚೇರಿಗೆ ಬಂದ್ರೆ ಒಮ್ಮೆ ಟೀ ಕುಡಿದು ಹೋಗ್ತಾರೆ, ಆದ್ರೆ ರೇಣುಕಾಚಾರ್ಯ ಎರಡು ಬಾರಿ ಟೀ ಕುಡಿದರೂ ಕೆಲಸ ಆಗಲಿಲ್ಲ ಅಂದ್ರೆ ಹೋಗೋದಿಲ್ಲ ಎಂದು ತಮಾಷೆ ಮಾಡಿದರು. ಕ್ಷೇತ್ರದ ಕುರಿತು ಯಾವುದೇ ಕೆಲಸ ಇದ್ದರೂ, ಅದನ್ನು ಮಾಡಿಕೊಂಡೇ ಅವರು ಹೋಗುತ್ತಾರೆ. ಅವರೊಬ್ಬ ಮಾದರಿ ಶಾಸಕ ಎಂದು ಹೊಗಳಿದರು.