ಮಂಗಳೂರು: ಟಿಪ್ಪು ಜಯಂತಿ ರದ್ದು ಪಡಿಸಿ ಕರ್ನಾಟಕ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಈ ಹಿಂದೆ ಟಿಪ್ಪುವನ್ನು ವೈಭವಿಕರಿಸಲಾಗುತ್ತಿತ್ತು. ಟಿಪ್ಪುವನ್ನು ವೈಭವೀಕರಿಸುವವರಿಗೆ ಯಾವ ಸತ್ಯವೂ ಬೇಕಾಗಿಲ್ಲ ಎಂದು ಹಿರಿಯ ಸಂಶೋಧಕ, ಸಾಹಿತಿ ಎಂ.ಚಿದಾನಂದ ಮೂರ್ತಿ ಹೇಳಿದರು.
ಮಂಗಳೂರು ಲಿಟರರಿ ಫೌಂಡೇಶನ್ನ ಆಶ್ರಯದಲ್ಲಿ ನಡೆದ ಮಂಗಳೂರು ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ಜೀವನ ಸಾಧನೆ ಪ್ರಶಸ್ತಿ ಸ್ವೀಕರಿಸಿ, ಸತ್ಯಂ ಶೋಧಂ ನಿರ್ಭಿತಂ ಎಂಬ ತಮ್ಮ ಕೃತಿ ಬಿಡುಗಡೆ ಬಳಿಕ ಮಾತನಾಡಿದ ಅವರು, ಟಿಪ್ಪುವನ್ನು ವೈಭವಿಕರಸಿ ತಮ್ಮನ್ನು ತಾವು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಟಿಪ್ಪು ಕರಾವಳಿ ಪ್ರದೇಶದಲ್ಲಿ ಮೀರ್ ಹುಸೇನ್ ಗೆ ಹಿಂದುಗಳನ್ನು ಕೊಲ್ಲಲು ಆದೇಶ ನೀಡಿದ್ದನು. ಯಾವುದೇ ಅನ್ಯಧರ್ಮವನ್ನು ನಾಶ ಮಾಡಲು ಹೇಳುವುದು ಖಂಡನೀಯ ಎಂದರು.
ಭಾರತೀಯ ಸಂಸ್ಕೃತಿ ಶ್ರೀಮಂತವಾದುದು, ಅನ್ಯದೇಶಗಳ ಮೇಲೆ ನಮ್ಮ ಸಂಸ್ಕೃತಿ ಅಕ್ರಮಣ, ಕ್ರೌರ್ಯಗಳನ್ನು ಎಂದಿಗೂ ಮಾಡಿಲ್ಲ. ಹೊರದೇಶದವರು ಭಾರತ ದೇಶದ ಮೇಲೆ ಮಾಡಿದ ಅಕ್ರಮಗಳು ಭೌತಿಕ ಮಾತ್ರವಲ್ಲ, ಮಾನಸಿಕ ಅಕ್ರಮವು ಆಗಿದೆ. ಹಿಂದು ಅಲ್ಲದವರನ್ನು ಕೊಲ್ಲಬೇಕೆಂದು ಯಾವತ್ತೂ ಹೇಳಿಲ್ಲ. ಆದರೆ ಹೊರದೇಶದ ಅನ್ಯಮತಗಳು ತಮ್ಮದಲ್ಲದ ಮತದ ವಿರುದ್ಧ ಸಮರ ಸಾರಿದವು ಎಂದರು.