ಬೆಳ್ತಂಗಡಿ: ತಾಲೂಕಿನ ಇಂದಬೆಟ್ಟು ಗ್ರಾಮದ ಬಂಗಾಡಿಯ 13ಮಂದಿಯ 'ಪೈ' ಕುಟುಂಬವೊಂದು ಕೊರೊನಾವನ್ನು ಎದುರಿಸಿ ಜಯಶಾಲಿಯಾಗಿದೆ. ಈ ಅವಿಭಕ್ತ ಕುಟುಂಬದ ಎಲ್ಲ ಸದಸ್ಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಲಾಕ್ಡೌನ್ಗೆ ಮೊದಲು ತಮ್ಮ ಮನೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗದಿತ ಜನರ ಭೂತಕೋಲ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಮುಂಚಿತವಾಗಿ ಮುಂಬೈನಿಂದ ಆಗಮಿಸಿದ್ದ ಒಬ್ಬರಿಗೆ ಇಲ್ಲಿ ಬಂದ ಬಳಿಕ ಕೊರೊನಾ ಕಾಣಿಸಿಕೊಂಡಿತ್ತು. ನಂತರ ಈ ಕುಟುಂಬದ ಒಬ್ಬೊಬ್ಬರಿಗೆ ಸೋಂಕು ಹರಡಿ 13 ಮಂದಿಯೂ ಕೊರೊನಾ ಪೀಡಿತರಾದರು.
ಮೂರು ವರ್ಷದ ಪುಟಾಣಿ ಸಹಿತ ಕುಟುಂಬದ ಎಲ್ಲಾ ವಯೋಮಾನದವರಿಗೂ ಸೋಂಕು ತಗುಲಿ 12 ಮಂದಿ ಐಸೋಲೇಶನ್ನಲ್ಲಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಕುಟುಂಬದ 60ರ ಹರೆಯದ ಒಬ್ಬರು ಮಾತ್ರ ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಇದೀಗ ಕುಟುಂಬವನ್ನು ಸೇರಿಕೊಂಡಿದ್ದಾರೆ.
ಕುಟುಂಬ ಸದಸ್ಯರೆಲ್ಲರೂ ವೈದ್ಯರ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುವುದರ ಜೊತೆಗೆ ಯಾವುದೇ ಒತ್ತಡಗಳಿಗೆ ಒಳಗಾಗದೆ ಔಷಧಿಗಳನ್ನು ಸೇವಿಸಿ ಸಂಪೂರ್ಣ ಗುಣಮುಖರಾಗಿದ್ದಾರೆ. ಮನೆಯಿಂದ ಹೊರಗೆ ಬರದೆ ಪರಿಸರದ ಇತರರಿಗೆ ಸೋಂಕು ತಗಲದಂತೆ ಹೆಚ್ಚಿನ ಮುಂಜಾಗ್ರತೆ ವಹಿಸಿದ್ದರು.
ಇವರೆಲ್ಲರ ಹೋಂ ಐಸೋಲೇಷನ್ ಅವಧಿ ಮುಗಿದಿದ್ದು ಆರೋಗ್ಯವಂತರಾಗಿರುವ ಕುಟುಂಬ ಸದಸ್ಯರು, ಕೇಕ್ ಕತ್ತರಿಸಿ ಕೊರೊನಾ ಎದುರಿಸಿ ಹೊರಬಂದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ 'ಈಟಿವಿ ಭಾರತ'ಗೆ ಪ್ರತಿಕ್ರಿಯಿಸಿದ ಕುಟುಂಬದ ಸದಸ್ಯ ಅನಿಲ್ ಪೈ, ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ ಗ್ರಾ.ಪಂ., ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯರು ಸಹಿತ ಆಪ್ತರೆಲ್ಲರೂ ಉತ್ತಮ ಸಹಕಾರ, ಸಲಹೆ ನೀಡಿ ಧೈರ್ಯ ತುಂಬಿದ್ದಕ್ಕೆ ಧನ್ಯವಾದ ತಿಳಿಸಿದರು.