ಮಂಗಳೂರು: ಎಂಸಿಎಫ್ ರಸಗೊಬ್ಬರ ತಯಾರಿಕಾ ಕಂಪನಿಯು ಸಾಮಾಜಿಕ ಬದ್ಧತಾ ಕಾರ್ಯದಡಿ ತನ್ನ ಅನುದಾನವನ್ನು ಮಾನವೀಯ ನೆಲೆಯಲ್ಲಿ ಜನರ ಬಾಳಿನಲ್ಲಿ ಧೈರ್ಯ ತುಂಬುವಂತಹ ಕೆಲಸ ಮಾಡುತ್ತಿದೆ. ಕಂಪನಿಯ ಲಾಭಂಶದ ಒಂದು ಭಾಗವನ್ನು ಕೃತಕ ಅಂಗಾಗ ಜೋಡಣೆಯಂತಹ ಕಾರ್ಯಕ್ರಮಗಳಿಗೆ ನೀಡುತ್ತಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.
ಪಣಂಬೂರು ಎಂಸಿಎಫ್ನಲ್ಲಿ ಮಂಗಳವಾರ ನಡೆದ ಕೃತಕ ಅಂಗಾಂಗ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಹಲವಾರು ಅಭಿವೃದ್ಧಿ ಕೆಲಸಗಳಿಗಾಗಿ ಬೇಡಿಕೆ ಸಲ್ಲಿಸುತ್ತಲೇ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರ ಪ್ರವಾಸದ ವೇಳೆ ಅಥವಾ ಕಚೇರಿಗೆ ಬಂದು ದಿವ್ಯಾಂಗರು ಕೃತಕ ಅಂಗಾಗ ನೀಡುವಂತೆ ಮನವಿ ಸಲ್ಲಿಸುತ್ತಿದ್ದಾಗ ಗುಣಮಟ್ಟದ ಸಲಕರಣೆ ವಿತರಿಸಲು ಎಂಸಿಎಫ್ಗೆ ಮನವಿ ಮಾಡಿದ್ದೆ. ಈ ಮೇರೆಗೆ ಕಳೆದ ಮೂರು ವರ್ಷಗಳಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಸಂಸ್ಥೆ ವತಿಯಿಂದ ನೀಡುತ್ತಿದ್ದಾರೆ. ಇದರ ಜತೆಗೆ ಶಿಕ್ಷಣ, ಆರೋಗ್ಯ, ಉಚಿತ ವೈದ್ಯಕೀಯ ಶಿಬಿರಗಳನ್ನು ಮಾಡುತ್ತಾ ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ದಿವ್ಯಾಂಗರಿಗೂ ಇತರರಂತೆ ಬದುಕಬೇಕೆಂಬ ಆಸೆಯಿರುತ್ತದೆ. ಅವರ ಕೆಲಸಗಳನ್ನು ಮಾಡಿಕೊಳ್ಳಲು ನಾವು ಅನುವು ಮಾಡಿಕೊಟ್ಟಾಗ ಅವರಲ್ಲಿ ಧೈರ್ಯ ತುಂಬಲು ಸಾಧ್ಯ .ಇಂತಹ ಕೆಲಸವನ್ನು ಎಂಸಿಎಫ್ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ಎಂಟು ಮಂದಿ ದಿವ್ಯಾಂಗರಿಗೆ ಕೃತಕ ಕಾಲು - ಕೈ ವಿತರಣೆ, ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಐದು ಟ್ರಾಲಿ, ಎರಡು ವೀಲ್ ಚೇರ್, ಸ್ಯಾನಿಟೈಸರ್, ಮಾಸ್ಕ್ ವಿತರಣೆ, ಮಂಗಳೂರಿನ ಅಂಗನವಾಡಿ ಫುನರ್ನವೀಕರಣಕ್ಕೆ 5 ಲಕ್ಷ ರೂ.ಬಿಡುಗಡೆಯ ಪತ್ರವನ್ನು ಇದೇ ಸಮಯದಲ್ಲಿ ವಿತರಿಸಲಾಯಿತು.
ಶಾಸಕ ವೇದವ್ಯಾಸ ಕಾಮತ್, ಎಂಸಿಎಫ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಭಾಕರ ರಾವ್, ದ.ಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮಚಂದ್ರ ಬಾಯರಿ, ಕಾರ್ಪೊರೇಟರ್ಗಳಾದ ಜಗದೀಶ್ ಶೆಟ್ಟಿ, ರಾಜೇಶ್ ಸಾಲ್ಯಾನ್, ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷಕ ಡಾ. ದುರ್ಗಾ ಪ್ರಸಾದ್, ಡಾ.ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.