ಚಿಕ್ಕಮಗಳೂರು: ದೇಶದಲ್ಲಿ ಆರ್ಥಿಕತೆ ಸ್ಥಿತಿ ಸುಧಾರಿಸಲು ಲಾಕ್ಡೌನ್ ಸಡಿಲಿಕೆ ಮಾಡಿ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದ್ರೆ ಜಿಲ್ಲೆಯಲ್ಲಿ ಕೊರೊನಾ ಭೀತಿಯ ಪರಿಣಾಮ ಸಾರ್ವಜನಿಕರು ಅಂಗಡಿಗಳಿಗೆ ಹೋಗಿ ವ್ಯಾಪಾರ ವಹಿವಾಟು ನಡೆಸಲು ಹಿಂದೇಟು ಹಾಕುತ್ತಿದ್ದಾರೆ.
ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆಯಾದ ನಂತರ ಶೇ. 50ರಷ್ಟು ಮಾತ್ರ ವ್ಯಾಪಾರ ನಡೆಯುತ್ತಿದೆ. ಎಳನೀರು ವ್ಯಾಪಾರಿಗಳು, ತರಕಾರಿ, ದಿನಸಿ, ಹಣ್ಣಿನ ಅಂಗಡಿಗಳು ಸೇರಿದಂತೆ ಇತರ ಅಂಗಡಿಗಳಲ್ಲೂ ಕನಿಷ್ಠ ಪ್ರಮಾಣದಲ್ಲಿ ವ್ಯವಹಾರ ನಡೆಯುತ್ತಿದೆ.
ಲಾಕ್ಡೌನ್ ಸಡಿಲಿಕೆಯ ನಂತರ ಸ್ವಲ್ಪ ಪ್ರಮಾಣದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೂ ಕೂಡಾ ಇದರಿಂದ ನಮಗೆ ಹೆಚ್ಚಿನ ರೀತಿಯ ಪ್ರಯೋಜನವಾಗುತ್ತಿಲ್ಲ. ಮೊದಲಿನ ರೀತಿಯಲ್ಲಿ ವ್ಯಾಪಾರ ನಡೆಯಬೇಕಾದರೆ ಇನ್ನೂ ಎರಡರಿಂದ ಮೂರು ತಿಂಗಳು ಕಳೆಯಬೇಕಾಗಬಹುದು. ಕಾರಣ ಕೊರೊನಾ ಭಯದಿಂದ ಸಾರ್ವಜನಿಕರು ರಸ್ತೆಗೆ ಇಳಿಯುತ್ತಿಲ್ಲ ಎಂಬ ಅಭಿಪ್ರಾಯವನ್ನು ಅಂಗಡಿ ಮಾಲೀಕರು ವ್ಯಕ್ತಪಡಿಸುತ್ತಿದ್ದಾರೆ.