ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಿಡಿಲು ಗುಡುಗಿನಿಂದ ಧಾರಾಕಾರ ಮಳೆ ಸುರಿದಿದ್ದು, ಸಿಡಿಲಿಗೆ ಮೂರು ಜನ ಮಹಿಳಾ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೂಡಿಗೆರೆ ತಾಲೂಕಿನ ಬಾಳೆಹೂಳೆ ಸಮೀಪದ ಹಿತ್ತಲ ಮಕ್ಕಿ ಗ್ರಾಮದ ಗಜೇಂದ್ರ ಹೆಬ್ಬಾರ್ ಎಂಬುವರ ತೋಟದಲ್ಲಿ ಈ ದುರ್ಘಟನೆ ನಡೆದಿದೆ.
ಮರಗಸಿ ಮಾಡುವ ವೇಳೆ ಮೂರು ಜನ ಮಹಿಳಾ ಕಾರ್ಮಿಕರು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದ್ದು, ಮೃತ ಮಹಿಳೆಯರು ತಮಿಳುನಾಡು ಮೂಲದವರಾಗಿದ್ದಾರೆ ಎನ್ನಲಾಗಿದೆ. ಕಳೆದ ಮೂರು ತಿಂಗಳಿಂದ ಈ ಭಾಗದಲ್ಲಿ ಮರಗಸಿ ಕೆಲಸ ಮಾಡುತಿದ್ದರು. ಮಾದಮ್ಮ (65), ಜ್ಯೋತಿ (28), ಮಾರಿ (27) ಮೃತ ಮಹಿಳಾ ಕಾರ್ಮಿಕರಾಗಿದ್ದು, ಇವರ ಮೃತದೇಹಗಳನ್ನು ಕಳಸ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.