ಚಾಮರಾಜನಗರ : ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ, ಅವರೊಬ್ಬ ಸೀನಿಯರ್ ಲೀಡರ್ ಈ ರೀತಿ ಮಾತನಾಡಬಾರದು. ಕೇಂದ್ರ ಮಂತ್ರಿಯಾಗಿದ್ದವರು, ದೊಡ್ಡ ಸಮುದಾಯದ ನಾಯಕರು, ಈ ರೀತಿ ಮಾತನಾಡುವುದು ಸರಿಯಲ್ಲ. ಇದನ್ನೂ ಮುಂದುವರೆಸಲೂ ಬಾರದು. ಈಗಾಗಲೇ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಪ ಯತ್ನಾಳ್ ಹೇಳಿಕೆ ಬಗ್ಗೆ ಗಮನ ಹರಿಸಿದ್ದಾರೆ ಎಂದು ಸಚಿವ ಸೋಮಣ್ಣ ಹೇಳಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಿಮಿಷಕ್ಕೊಂದು ಮಾತನಾಡುತ್ತಾರೆ. ಹಿಟ್ ಅಂಡ್ ರನ್ ಮಾಡುತ್ತಿದ್ದು, ಪಿಎಸ್ಐ ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಬಳಿ ಸೂಕ್ತ ದಾಖಲಾತಿ ಇದ್ದರೇ ಒದಗಿಸಲಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿಕೆಗಳ ವಿರುದ್ಧ ಕಿಡಿಕಾರಿದರು.
ಬೊಮ್ಮಾಯಿ ಬದಲಾವಣೆ ಕಟ್ಟುಕಥೆ : ಸಿಎಂ ಬೊಮ್ಮಾಯಿ ಕಾಮನ್ಮ್ಯಾನ್ ಸಿಎಂ, ಓರ್ವ ಸರಳ ಮುಖ್ಯಮಂತ್ರಿ ಯಾವ ರೀತಿ ಜನಪರ ಆಗಿರುತ್ತಾರೆ ಎಂಬುದಕ್ಕೆ ಬೊಮ್ಮಾಯಿ ಉದಾಹರಣೆ. ಬೊಮ್ಮಾಯಿ ಅವರು ನಿರೀಕ್ಷೆಗೆ ಮೀರಿ ವೇಗವಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಪೀಡಿಗೆ ಕೆಲವರು ಶಾಕ್ ಆಗಿದ್ದಾರೆ, ಸಾಲು ಸಾಲು ಸಭೆ, ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗಿದೆ. ರಾಷ್ಟ್ರೀಯ ನಾಯಕರುಗಳೇ ಅವರ ಕೆಲಸ ಮೆಚ್ಚಿಕೊಂಡಿದ್ದು, ಅವರ ಬದಲಾವಣೆ ಎಂಬುದು ಕೇವಲ ಮಾಧ್ಯಮಗಳ ಕಟ್ಟುಕಥೆ, ಸುಮ್ಮನೆ ಸೃಷ್ಟಿಸುತ್ತಾರೆ. ಇನ್ನಾದರೂ ಸಿಎಂ ಬದಲು ಎಂಬ ಸುದ್ದಿಯನ್ನು ನಿಲ್ಲಿಸಿ, ಒಳ್ಳೆಯದನ್ನು ತೋರಿಸಿ ಎಂದರು.
ಇದನ್ನೂ ಓದಿ: ವಿಡಿಯೋ : ರಾಷ್ಟ್ರರಾಜಧಾನಿಯಲ್ಲಿ ಗುಂಡಿನ ದಾಳಿ, ಇಬ್ಬರಿಗೆ ಗಾಯ