ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ನ ದಾಳಿಗೆ ಬಲಿಯಾದ ಪೊಲೀಸರಿಗೆ ಘಟನೆ ನಡೆದ ಸ್ಥಳಗಳಲ್ಲೇ ಪುಷ್ಪನಮನ ಸಲ್ಲಿಸಿ ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಲಾಯಿತು.
1992ರ ಮದ್ರಾಸ್ ಪ್ರೆಸಿಡೆನ್ಸಿ ಆಳ್ವಿಕೆಯ ಕಾಲದಲ್ಲಿ ರಾಮಾಪುರ ಪೊಲೀಸ್ ಠಾಣೆ ಮೇಲೆ ವೀರಪ್ಪನ್ ದಾಳಿ ಮಾಡಿ, ಪೊಲೀಸ್ ಕಾನ್ಸ್ಟೇಬಲ್ಗಳಾದ ರಾಚಪ್ಪ, ಗೋವಿಂದರಾಜು, ಪ್ರೇಮಕುಮಾರ್, ಇಳಂಗೋವನ್, ಸಿದ್ದರಾಜು ಎಂಬವವರನ್ನು ಹತ್ಯೆ ಮಾಡಲಾಗಿತ್ತು. ಇಂದು ಆ ಸ್ಥಳದಲ್ಲಿಯೇ ಹುತಾತ್ಮ ಪೊಲೀಸರಿಗೆ ಗೌರವ ನಮನ ಸಲ್ಲಿಸಲಾಯಿತು.
ಬಳಿಕ 1992ರ ಆಗಸ್ಟ್ 14ರಂದು ಎಸ್ಪಿ ಟಿ.ಹರಿಕೃಷ್ಣ, ಪಿಎಸ್ಐ ಶಕೀಲ್ ಅಹಮದ್, ಎಎಸ್ಐ ಬೆನಗೊಂಡ, ಕಾನ್ಸ್ಟೇಬಲ್ಗಳಾದ ಸಿ.ಎಂ.ಕಾಳಪ್ಪ, ಸುಂದರ್, ಅಪ್ಪಚ್ಚು ಎಂಬವವರನ್ನು ಬಲಿಪಡೆದ ಮೀಣ್ಯಂ ದಾಳಿ ಸ್ಮಾರಕ ಸ್ಥಳಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದರು.
ಇನ್ನು, ಮಲೆಮಹದೇಶ್ವರ ಬೆಟ್ಟ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹೊಗೆನಕಲ್ ದಾಳಿ ಎಂದೇ ಹೆಸರಾದ ವೀರಪ್ಪನ್ ದಾಳಿಗೆ ಬಲಿಯಾದ ಪೊಲೀಸರಿಗೆ ಗೌರವ ನಮನ ಸಲ್ಲಿಸಿದರು. ಹುತಾತ್ಮ ದಿನಾಚರಣೆ ಪ್ರಯುಕ್ತ ರಾಮಾಪುರ ಪೊಲೀಸ್ ಠಾಣೆಗೆ ದೀಪಾಲಂಕಾರ ಮಾಡಿರುವುದು ವಿಶೇಷವಾಗಿತ್ತು.