ಕೊಳ್ಳೇಗಾಲ (ಚಾಮರಾಜನಗರ): ಜುಲೈ 7 ರಂದು ಮಹಾರಾಷ್ಟ್ರದ ದಾದರ್ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ರವರ ರಾಜಗೃಹದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವುದು ಖಂಡನೀಯ. ಸರ್ಕಾರ ಈ ಕೃತ್ಯದ ಬಗ್ಗೆ ತೀವ್ರ ತನಿಖೆ ನಡೆಸಿ ಇದರ ಹಿಂದಿರುವ ಕಾಣದ ಕೈಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎನ್. ಮಹೇಶ್ ಒತ್ತಾಯಿಸಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ಮಾತನಾಡಿದ ಅವರು, ರಾಜಗೃಹದ ಮೇಲಿನ ದಾಂಧಲೆ ಕುರಿತು ಮಹಾರಾಷ್ಟ್ರದ ಸ್ನೇಹಿತರ ಜೊತೆ ಮಾತನಾಡಿದ್ದೇನೆ. ನನಗೆ ಸಿಕ್ಕ ಮಾಹಿತಿ ಪ್ರಕಾರ ಒಂದು ಕೋಮುವಾದಿ ಶಕ್ತಿಗಳು ಜಾತಿ ಗಲಭೆಯನ್ನು ಸೃಷ್ಟಿಸಿ ದೊಡ್ಡ ಸುದ್ದಿ ಮಾಡಲು ಈ ಕೃತ್ಯ ಎಸಗಿದ್ದಾರೆ. ಆದರೆ ಕಿಡಿಗೇಡಿಗಳ ಪ್ರಯತ್ನ ವಿಫಲವಾಗಿದ್ದು, ಮನೆ ಮುಂದಿನ ಹೂ ಕುಂಡಗಳನ್ನು ಒಡೆದು ಗಲಾಟೆ ಮಾಡಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದರು.
ಈ ಸಂಬಂಧ ಉಮೇಶ ಸಿತಾರಾಮ್ ಜಾಧವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ತಪ್ಪಿಸಿಕೊಂಡಿದ್ದಾನೆ. ದಲಿತರು ಮತ್ತು ಹಿಂದುಳಿದ ಜಾತಿಗಳ ನಡುವೆ ಗಲಭೆ ಏರ್ಪಡಿಸುವ ಸಲುವಾಗಿ ಕೃತ್ಯ ನಡೆಸಲಾಗಿದ್ದು, ಈ ಷಡ್ಯಂತ್ರವನ್ನು ಭೇದಿಸಿ ಮುಂದೆ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದು ಮಹಾರಾಷ್ಟ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕೃತ್ಯದ ಹಿಂದೆ ದೊಡ್ಡ ಪಿತೂರಿ:
ಅಂಬೇಡ್ಕರ್ ಅವರ ಮೇರು ವ್ಯಕ್ತಿತ್ವವನ್ನು ಹಾಳು ಮಾಡಲು ಈ ರೀತಿಯ ಕೃತ್ಯ ಮೇಲಿಂದ ಮೇಲೆ ನಡೆಯುತ್ತಿವೆ. ಇದು ಜಾಧವ್ ಎಂಬ ಓರ್ವ ವ್ಯಕ್ತಿಯ ಕೃತ್ಯವಲ್ಲ. ಇದರ ಹಿಂದೆ ದೊಡ್ಡ ಪಿತೂರಿ ಇದ್ದು, ಪ್ರಕರಣದ ಸೂಕ್ತ ತನಿಖೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಭದ್ರತಾ ವೈಫಲ್ಯ:
ರಾಜಗೃಹದ ಅರ್ಧ ಭಾಗವನ್ನು ಗ್ರಂಥಾಲಯವಾಗಿ ಮಾರ್ಪಡಿಸಲಾಗಿದ್ದು, ಇಲ್ಲಿ ಅಂಬೇಡ್ಕರ್ ಮೊಮ್ಮಕ್ಕಳು ಸಹ ವಾಸವಾಗಿದ್ದಾರೆ. ಆದರೆ ಇಲ್ಲಿಗೆ ಭದ್ರತೆ ಇರಲಿಲ್ವಾ ಎಂಬುದು ಪ್ರಶ್ನೆಯಾಗಿದೆ. ಸರ್ಕಾರ ಭದ್ರತಾ ವ್ಯವಸ್ಥೆ ಮಾಡುವಲ್ಲಿ ಎಡವಿದೆ ಎಂದರು.
ತಹಶೀಲ್ದಾರ್ ಕುಟುಂಬಕ್ಕೆ 5 ಕೋಟಿ ರೂ. ಪರಿಹಾರ ನೀಡಿ:
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಚಂದ್ರಮೌಳೀಶ್ವರ ಕೊಲೆ ಪ್ರಕರಣ ಅವಮಾನೀಯ. ಭೂಮಿ ವಿವಾದ ಸರ್ವೆ ಕಾರ್ಯಕ್ಕೆ ತೆರಳಿದ ತಹಶೀಲ್ದಾರ್ ಅನ್ನು ಕೊಲೆಗೈಯಲಾಗಿದೆ. ಇಂಥ ವ್ಯಾಜ್ಯ ಬಗೆಹರಿಸುವ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಅವಶ್ಯಕ. ಆದರೆ ಸೂಕ್ತ ಭದ್ರತೆ ನೀಡದ ಕಾರಣ ಈ ದಾರುಣ ಘಟನೆ ನಡೆದಿದೆ. ಜನಪರ ಕೆಲಸ ಮಾಡುತ್ತಿದ್ದ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ರಾಜ್ಯ ಸರ್ಕಾರ 25 ಲಕ್ಷ ನೆರವು ನೀಡಲು ಮುಂದಾಗಿದೆ. ಮೃತ ಅಧಿಕಾರಿಯ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೂ ಸರ್ಕಾರ ಅವರ ಕುಟುಂಬಕ್ಕೆ 5 ಕೋಟಿ ರೂ. ಪರಿಹಾರ ನೀಡಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.