ಚಾಮರಾಜನಗರ: ನಾಪತ್ತೆಯಾಗಿದ್ದ ಗಿರಿಜನ ವ್ಯಕ್ತಿಯೋರ್ವ 5 ದಿನಗಳ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಸಮೀಪ ನಡೆದಿದೆ.
ಕಣಿಯನಪುರ ಗ್ರಾಮದ ಬೊಮ್ಮ(45) ಮೃತ ದುರ್ದೈವಿ. ಮೃತರು ಹಲವು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು, ಕಳೆದ 5 ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಇಂದು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಆನೆ ದಾಳಿಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಕುಂದಕೆರೆ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ, ಇದುವರೆಗೆ ಕುಟುಂಬಸ್ಥರು ಆನೆ ದಾಳಿಯಿಂದ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿಲ್ಲ. ತನಿಖೆ ನಡೆಸಿದಾಗಲಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಹೇಳಿದರು.