ಬೀದರ್: ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಸಚಿವರಾಗಿದ್ದ ಈಶ್ವರ ಖಂಡ್ರೆ ವಸತಿ ಯೋಜನೆ ದುರ್ಬಳಕೆ ಮಾಡಿಕೊಂಡು, ಮತದಾರರ ದಾರಿ ತಪ್ಪಿಸುವ ಮೂಲಕ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಬಿಜೆಪಿ ಮುಖಂಡ ಡಿ.ಕೆ ಸಿದ್ರಾಮ ಗಂಭೀರ ಆರೋಪಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹಾಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು, ವಸತಿ ಯೋಜನೆ ಅಡಿಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ತಾವೇ ಖುದ್ದಾಗಿ ಸಹಿ ಮಾಡಿದ ಮನೆ ಮಂಜೂರಾತಿ ಆದೇಶ ನೀಡಿದ್ದಾರೆ. ಸರ್ಕಾರಿ ಅಧಿಕಾರಿಗಳ ಸಹಿ ಇಲ್ಲದೇ, ಅವರೇ ಸಹಿ ಹಾಕಿ ಚುನಾವಣೆಗೂ ಮುನ್ನ ತಮ್ಮ ಮನೆ ಮುಂದೆ ಪೆಂಡಾಲ ಹಾಕಿ ಸಾವಿರಾರು ಜನರಿಗೆ ಮನೆ ಮಂಜೂರಾತಿ ಆದೇಶ ಹಂಚಿಕೆ ಮಾಡಿದ್ದಾರೆ ಎಂದರು.
ಗ್ರಾಮ ಸಭೆ, ವಾರ್ಡ್ ಸಭೆ ಮಾಡದೆ ಮನಸ್ಸಿಗೆ ಬಂದಂತೆ ಚುನಾವಣೆಯಲ್ಲಿ ಬಡವರ, ನಿರ್ಗತಿಕರ ಹಾಗೂ ಮತದಾರರ ದಿಕ್ಕು ತಪ್ಪಿಸುವ ದುರುದ್ದೇಶದಿಂದ ನಕಲಿ ಮಂಜೂರಾತಿ ಪತ್ರಗಳು ಹಂಚಿಕೆ ಮಾಡಿದ್ದಾರೆ. ಇದರಿಂದಾಗಿ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಈಗ ಮನೆ ಮಂಜೂರಾತಿ ಪತ್ರ ಇಟ್ಟಕೊಂಡು ಬಿಜೆಪಿ ಸರ್ಕಾರದ ಮೇಲೆ ಜನರಿಂದ ಆಕ್ರೋಶ ಹೊರ ಹಾಕಲು ಕಾರಣರಾಗಿದ್ದಾರೆ ಎಂದರು.
ಕಳೆದ ತಿಂಗಳು ವಸತಿ ಸಚಿವ ವಿ. ಸೊಮಣ್ಣ ಅವರು ಭಾಲ್ಕಿ ಪಟ್ಟಣಕ್ಕೆ ಭೇಟಿ ನೀಡಿದಾಗ, ಈ ಪ್ರಕರಣದ ಸಮಗ್ರ ತನಿಖೆಗೆ ಆದೇಶ ಮಾಡಿದ್ದಾರೆ. ಬಡವರ ಮನೆಗಳು ಶ್ರೀಮಂತರ ಪಾಲಾಗಿದ್ದು, ಮನೆ ಇದ್ದವರಿಗೂ ಮನೆ ನೀಡಿರುವ ಹಲವಾರು ಪ್ರಕರಣ ಬೆಳಕಿಗೆ ಬಂದಿದೆ ಎಂದರು.
ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ವಸತಿ ಯೋಜನೆಯಡಿ ಈಶ್ವರ ಖಂಡ್ರೆ ಅವರು ನೇರವಾಗಿ ಪಾಲ್ಗೊಂಡಿದ್ದು, ಕಾಂಗ್ರೆಸ್ ಕಾರ್ಯಕರ್ತರು, ಸರ್ಕಾರಿ ನೌಕರರು ಹೀಗೆ ಸ್ಥಿತಿವಂತರಿಗೆ ಯೋಜನೆ ಲಾಭ ನೀಡಿದ್ದು ಈ ಎಲ್ಲಾ ಅಕ್ರಮ ಬಯಲಿಗೆ ಬರಬೇಕಾದ್ರೆ ಸಮಗ್ರ ತನಿಖೆ ನಡೆಸಬೇಕು ಎಂದರು.