ಬಳ್ಳಾರಿ: ಇಂದಿನ ದಿನಗಳಲ್ಲಿ ಯುವ ಸಮುದಾಯ ವಿದ್ಯಾಭ್ಯಾಸ ನಡೆಸಿ ಮಹಾ ನಗರಗಳಲ್ಲೇ ಬದುಕು ಕಂಡುಕೊಳ್ಳಲು ಬಯಸುವುದು ಹೆಚ್ಚು. ಆದರೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಮನ್ಮತಕೇರಿಯ ಯುವಕನೋರ್ವ ವಿದ್ಯಾಭ್ಯಾಸದ ನಂತರ ಹೈನುಗಾರಿಕೆಯನ್ನೇ ಉದ್ಯಮವನ್ನಾಗಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾನೆ.
ಮನ್ಮತಕೇರಿಯ ಎ. ನಾಗರಾಜ್ ಹಾಗೂ ನಿರ್ಮಲಾ ದಂಪತಿಯ ಪುತ್ರ 24 ವರ್ಷದ ಜಂಬುನಾಥ್ ಎಂಬಾತ 2012 - 2013ನೇ ಸಾಲಿನಲ್ಲಿ ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯದ ಅಂಗಸಂಸ್ಥೆಯದ ( ಧಾರವಾಡದಲ್ಲಿ ) ತೋಟಗಾರಿಕೆಯಲ್ಲಿ ಎರಡು ವರ್ಷದ ತರಬೇತಿ ಪಡೆದುಕೊಂಡಿದ್ದಾರೆ. ಬಳಿಕ 2014ರಲ್ಲಿ ಗುಜರಾತ್ನ ಜೂನಾಗಡ ಜಿಲ್ಲೆಯ ರಾಜುಬಾಯಿಯಿಂದ 5 ಗಿರ್ ತಳಿ ಹಸುಗಳು ಮತ್ತು ಒಂದು ಗಿರ್ ತಳಿಯ ಹೋರಿ ಖರೀದಿಸಿದರು. ಅದರ ವೆಚ್ಚ 2 ಲಕ್ಷ 30 ರೂಪಾಯಿ ಮತ್ತು ವಾಹನದ ಬಾಡಿಗೆ 50,000 ಸಾವಿರ.
ಈ ಹಸುಗಳಿಂದ ಬೆಳಗ್ಗೆ ಮತ್ತು ಸಂಜೆ ಒಟ್ಟು 35 ಲೀಟರ್ ಹಾಲು ಸಿಗುತ್ತಿತ್ತು. 1 ಲೀಟರ್ ಹಾಲಿಗೆ 70 ರೂಪಾಯಿ ಇದಿದ್ದರಿಂದ ದಿನಕ್ಕೆ 2,450 ರೂಪಾಯಿ ಬಂದರೆ ತಿಂಗಳಿಗೆ 73,500 ರೂಪಾಯಿ ಸಿಗುತ್ತಿತ್ತು. ಆದರೆ ಗಿರ್ ತಳಿಯ ಹಸುಗಳಿಗೆ ಅದರ ಆರೋಗ್ಯ, ಮೇವು, ಕೆಲಸ ಮಾಡುವ ಕೂಲಿಗರಿಗೆ ಆಗುವ ಒಟ್ಟು ಖರ್ಚು 50,000 ರೂಪಾಯಿ ಕಳೆದರೆ 23,500 ಉಳಿತಾಯವಾಗುತ್ತಿತ್ತು . ಆದರೆ ನಂತರದಲ್ಲಿ ಗಿರ್ ತಳಿ ಹಸು ಹಾಲು ಕಡಿಮೆ ನೀಡುತ್ತೇ ಹಾಗೇ ಲಾಭ ಕಡಿಮೆ ಇತ್ತು ಎನ್ನುವ ಕಾರಣದಿಂದ ಆ ಎಲ್ಲಾ ಗಿರ್ ತಳಿಯನ್ನು 2,30,000 ಸಾವಿರ ರೂ.ಗೆ ಹೊಸಪೇಟೆ ರೈತನಿಗೆ ಮಾರಾಟ ಮಾಡಿದರು. ನಂತರ ಹರಿಯಾಣದಿಂದ 5 ಮುರ್ರಾ ತಳಿಯ ಎಮ್ಮೆಗಳನ್ನು 4 ಲಕ್ಷ 90 ಸಾವಿರ ನೀಡಿ ಹಾಗೂ ಎರಡನೇ ಬಾರಿ ಮತ್ತದೇ 4 ಮುರ್ರಾ ತಳಿಯನ್ನು 4 ಲಕ್ಷ 20 ಸಾವಿರ ಕೊಟ್ಟು ತಂದರು.
ಮುರ್ರಾ ತಳಿ ಎಮ್ಮೆಗಳ ಆರೈಕೆ ಹೇಗೆ ?
ಪ್ರಾಣಿಗಳ ಮೇಲೆ ಬಹಳ ಪ್ರೀತಿ ಇರಬೇಕು ಅದಕ್ಕೆ ಆಹಾರ ಹಾಕುವುದರಿಂದ, ಅವುಗಳಿಗೆ ಸ್ನಾನ ಮಾಡಿಸುವುದು, ಹಾಲು ಹಿಂಡುವುದು, ಈಜಾಡಲು ಕೆರೆಗೆ ಬಿಡುವುದು ಬಹಳ ಮುಖ್ಯವಾಗಿದೆ. ಪ್ರಾಣಿಗಳು ಸಹ ನಮ್ಮನ್ನು ಕಾಯುತ್ತಾ ಇರುತ್ತವೆ. ಬೆಳಗಿನ ಜಾವ 3 ಗಂಟೆಯಿಂದ 6 ಗಂಟೆವರೆಗೆ ಹಾಲು ಕರೆಯಲಾಗುತ್ತದೆ. ಅದೇ ಸಮಯದಲ್ಲಿ ಮೇವು ಇನ್ನಿತರ ಆಹಾರ ನೀಡಲಾಗುತ್ತದೆ. 9 ಗಂಟೆಗೆ ಕೆರೆಗೆ ಈಜಾಡಲು ಬಿಡಲಾಗುತ್ತದೆ. ಎರಡು ತಾಸು ಮಾತ್ರ, ಕೆಲ ಸಮಯದಲ್ಲಿ ಡೈರಿಯಲ್ಲಿಯೇ ಸ್ನಾನ ಮಾಡಿಸಲಾಗುತ್ತದೆ ಅವುಗಳಿಗೆ ನೀರೆಂದರೇ ಬಹಳ ಪ್ರೀತಿ ಎನ್ನುತ್ತಾರೆ.
ಪ್ರಸ್ತುತ ಜಂಬುನಾಥನ ಬಳಿ ಎಂಟು ಮುರ್ರಾ ತಳಿ ಎಮ್ಮೆ ಮತ್ತು 6 ಮುರ್ರಾ ಕರುಗಳಿವೆ. ಅದರಲ್ಲಿ 5 ಹೆಣ್ಣು ಮತ್ತು ಒಂದು ಗಂಡು ಇದೆ. ಇವುಗಳಿಗೆ ಪಾಪಿನಾಯಕನ ಹಳ್ಳಿಯ ರೈತ ಮುಂಗಡವಾಗಿ ಹಣ ನೀಡಿದ್ದಾರೆ. ಆರು ತಿಂಗಳವರೆಗೆ ಬೆಳೆಸಿದ ನಂತರ 50,000 ರೂಪಾಯಿ ಕೊಟ್ಟು ತೆಗೆದುಕೊಂಡು ಹೋಗುತ್ತಾರೆ. ಮುರ್ರಾ ತಳಿಯ ಎಮ್ಮೆಗಳ ಕರುಗಳಿಗೂ ಬೇಡಿಕೆ ಇದೆ ಎನ್ನುತ್ತಾರೆ ಜಂಬುನಾಥ.
ಡೈರಿ ನಿರ್ಮಾಣ ವೆಚ್ಚ:
ಇನ್ನು ಈ ಮುರ್ರಾ ತಳಿ 8 ಎಮ್ಮೆ ವಾಸವಾಗಲು ಕಬ್ಬಿಣ ಬಳಸಿ ಕೊಠಡಿ ನಿರ್ಮಾಣಕ್ಕೆ 3 ಲಕ್ಷ ಖರ್ಚಾಗಿದೆ. ಇವರ ತಂದೆ ನಾಗರಾಜ್ ಅವರು ಜಂಬುನಾಥ, ಓದಿದವನಾಗಿದ್ದು, ಈತನಿಗೆ ಇವೆಲ್ಲಾ ಏಕೆ? ಓದಲಾರದವರು ಇಂತಹ ಕೆಲಸ ಮಾಡಬೇಕೆಂದು ಹೇಳಿದ್ದಲ್ಲದೇ ನಿನಗೆ ಮಾಡಲಾಗುವುದಿಲ್ಲ, ನಾನು ದುಡ್ಡು ಕೊಡುತ್ತಿಲ್ಲ ಸಣ್ಣ ಹುಡುಗ ನೀನು ಎಂದಿದ್ದರಂತೆ ಆದರೆ, ಜಂಬುನಾಥ ದೊಡ್ಡಪ್ಪ ಸಿದ್ದೇಶ್ವರ ಮತ್ತು ಚಿಕ್ಕಪ್ಪ ಹನುಮನಗೌಡ ಅವರು ಹಣದ ಪ್ರೋತ್ಸಾಹ ಮಾಡಿದ ಪರಿಣಾಮ ಇಂದು ಈ ಯುವಕ ಹೈನುಗಾರಿಕೆಯಲ್ಲಿ ಸ್ವಾವಲಂಬಿಯಾಗುವುದಲ್ಲದೇ ಇತರ ವಿದ್ಯಾವಂತ ಯುವಕರಿಗೂ ಮಾದರಿಯಾಗಿದ್ದಾನೆ.