ಅಥಣಿ: ಉಪ ಮುಖ್ಯಮಂತ್ರಿ ಸವದಿ ಅವರು ನನಗಿಂತ ದೊಡ್ಡವರು ಅವರು ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಕುರಿತು ನಾನು ಮಾತನಾಡುವುದಿಲ್ಲ. ಎಂದು ಅಥಣಿಯ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 4 ಮತ್ತು 5ರಂದು 'ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಸ್ವೀಕಾರ ಮಾಡುತ್ತೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ. ಈಗ ನನ್ನ ಕೆಲಸ ಪ್ರವಾಹ ಸಂತ್ರಸ್ತರ ನೋವಿಗೆ ಸ್ಪಂದಿಸುವುದು ಮತ್ತು ಕ್ಷೇತ್ರದ ಅಭಿವೃದ್ಧಿ ಪರ ಕಾರ್ಯವನ್ನು ನಿರ್ವಹಿಸುವುದಾಗಿದೆ ಎಂದರು.
ಬಿಜೆಪಿ ಸರ್ಕಾರದಿಂದ ಅಭಿವೃದ್ಧಿಗಾಗಿ ಅನುದಾನ ತರಲಾಗಿದ್ದು ಅದರಲ್ಲಿ ಅಥಣಿ ಪುರಸಭೆ ವ್ಯಾಪ್ತಿಯಲ್ಲಿ 16 ಕೋಟಿ ರೂ.ಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದೇ ಸರ್ಕಾರದಿಂದ ಈ ಹಿಂದೆ 19 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಮಸರಗುಪ್ತ ಗ್ರಾಮದ ಬಳಿ ಇರುವ ಅಗ್ರಾಣಿ ನದಿ - ಸೇತುವೆ ಜೊತೆ ಬಾಂದಾರ ನಿರ್ಮಾಣಕ್ಕೆ 1 ಕೋಟಿ ರೂ., ಋತನಟ್ಟಿ ಗ್ರಾಮದ ಹಿರಿಹಳಕ್ಕೆ ಸೇತುವೆ ಜೊತೆ ಬಾಂದಾರಕ್ಕಾಗಿ 1 ಕೋಟಿ 30 ಲಕ್ಷ ರೂ., ದೇಸಾಯರಟ್ಟಿ ಗ್ರಾಮದ ಹಿರಿ ಹಳ್ಳಕ್ಕೆ ಸೇತುವೆ ಜೊತೆ ಬಾಂದಾರಕ್ಕಾಗಿ 1 ಕೋಟಿ ರೂ., ಕೊಕಟನೂರ ಖೋತನಟ್ಟಿ ನಡುವೆ ಬರುವ ಹಳ್ಳಕ್ಕೆ 80 ಲಕ್ಷ ರೂ., ಬುರ್ಲಟ್ಟಿ ಗ್ರಾಮದ ಹಳ್ಳಕ್ಕೆ 80 ಲಕ್ಷ ರೂ., ಅದೇ ರೀತಿ ಐಗಳಿ ಗ್ರಾಮದ ಮಾಳಿ ತೋಟದ ಹಳ್ಳಕ್ಕೆ 70 ಲಕ್ಷ ರೂಗಳಿಂದ ಸೇತುವೆ ಜೊತೆ ಬಂದರು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.