ಬೆಂಗಳೂರು: ಕಳೆದ ಡಿಸೆಂಬರ್ನಲ್ಲಿ ಮುಷ್ಕರ ನಡೆಸಿದ್ದ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಕಾರ್ಮಿಕ ಸಂಘಟನೆಗಳಿಂದ 2.5 ಕೋಟಿ ರೂ. ನಷ್ಟ ವಸೂಲಿ ಮಾಡಲು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಮತ್ತು ಮುಷ್ಕರನಿರತ 4 ಸಾವಿರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ನಿಗಮದ ಪರ ವಕೀಲರು ಹೈಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ಸಾರಿಗೆ ಸಿಬ್ಬಂದಿ ಮುಷ್ಕರ ನಡೆಸಿದ ಹಿನ್ನೆಲೆ ಸರ್ಕಾರ ಹಾಗೂ ಸಾರಿಗೆ ಸಂಸ್ಥೆಗಳಿಗೆ ಆಗಿರುವ ನಷ್ಟವನ್ನು ಮುಷ್ಕರ ಕೈಗೊಂಡವರಿಂದಲೇ ವಸೂಲು ಮಾಡಲು ನಿರ್ದೇಶಿಸುವಂತೆ ಕೋರಿ, ನಗರದ ಸಮರ್ಪಣಾ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಮುಷ್ಕರಕ್ಕೆ ಕರೆ ನೀಡಿದ್ದ ಸಂಘಟನೆಗಳಿಂದ 2.5 ಕೋಟಿ ರೂ. ನಷ್ಟ ವಸೂಲಿಗೆ ಸಿವಿಲ್ ಕೋರ್ಟ್ನಲ್ಲಿ ದಾವೆ ಹೂಡಲಾಗಿದೆ. ಹಾಗೆಯೇ 4,000 ಸಿಬ್ಬಂದಿ ವಿರುದ್ದ ಶಿಸ್ತುಕ್ರಮ ಜರುಗಿಸಲು ಕ್ರಮ ಕೈಗೊಳ್ಳತ್ತಿದ್ದೇವೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಈ ಕುರಿತ ಸಮಗ್ರ ವರದಿಯನ್ನು ಮುಂದಿನ ಆರು ವಾರಗಳಲ್ಲಿ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಜೂ.4ಕ್ಕೆ ಮುಂದೂಡಿತು.
ಅರ್ಜಿದಾರರು, ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಮುಷ್ಕರದಿಂದ ಸರ್ಕಾರಕ್ಕೆ 7.9 ಕೋಟಿ ರೂ. ನಷ್ಟವಾಗಿದೆ. ಈ ಕುರಿತು ನಿಗಮವೇ ಆರ್ಟಿಐ ಮಾಹಿತಿಯಲ್ಲಿ ನಷ್ಟದ ಮೊತ್ತವನ್ನು ಒಪ್ಪಿಕೊಂಡಿದೆ. ಹಾಗಾಗಿ ಮುಷ್ಕರಕ್ಕೆ ಕರೆ ನೀಡಿದ ಸಂಘಟನೆಗಳಿಂದ ನಷ್ಟವನ್ನು ವಸೂಲು ಮಾಡಬೇಕು ಮತ್ತು ನಿಯಮ ಬಾಹಿರವಾಗಿ ಮುಷ್ಕರ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿ: ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ : ಸಿಎಂ ಯಡಿಯೂರಪ್ಪ