ರಾಯಚೂರು: ಹಿರಿತನಕ್ಕೆ ಗೌರವ ಸಿಗದಿರುವುದಕ್ಕೆ ಪಕ್ಷದ ವಿರುದ್ಧ ಅಸಮಧಾನಗೊಂಡು ರಾಮಲಿಂಗಾರೆಡ್ಡಿ ಸೇರಿ ಎರಡೂ ಪಕ್ಷದ ಹಿರಿಯ ನಾಯಕರು ರಾಜೀನಾಮೆ ನೀಡಿದ್ದಾರೆ ಹೊರತು ಇದು ಬಿಜೆಪಿ ಆಪರೇಶನ್ ಕಮಲವಲ್ಲ. ಅವರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ರಾಯಚೂರು ಸಂಸದ ಅಮರೇಶ್ವರ ನಾಯಕ ತಿಳಿಸಿದರು.
ಬಿಜೆಪಿಯಿಂದ ಹಮ್ಮಿಕೊಂಡ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವಾರು ಬಾರಿ ಶಾಸಕರಾಗಿ ಆಯ್ಕೆಯಾದವರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ. ಹಿರಿತನಕ್ಕೂ ಬೆಲೆ ನೀಡದೇ ನೂತನ ಸಮ್ಮಿಶ್ರ ಸರ್ಕಾರದಲ್ಲಿ ಕಡೆಗಣಿಸಿದ್ದಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಬಿಜೆಪಿಯ ಕೈವಾಡವಿಲ್ಲ ಎಂದರು.
ಅತ್ಯಂತ ಹೆಚ್ಚಿನ ಸ್ಥಾನವನ್ನು ಗೆದ್ದರೂ ಅಧಿಕಾರದಲ್ಲಿರಬೇಕಾದ ಬಿಜೆಪಿಯನ್ನು ದೂರವಿಟ್ಟು 37 ಸ್ಥಾನವನ್ನು ಪಡೆದ ಪಕ್ಷ ಅಧಿಕಾರದಲ್ಲಿದೆ. ಅದು ತಾತ್ಕಾಲಿಕ ಗಿಡ ಎಂದು ಈಗ ರಾಜೀನಾಮೆ ನೀಡಿದ ಬಳಿಕ ಗೊತ್ತಾಗಿದೆ ಎಂದರು.