ಬೆಂಗಳೂರು: ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತಪಾಸಣೆಗೆ ಒಳಗಾಗಲು ವಿದೇಶಗಳಿಂದ ನಗರಕ್ಕೆ ಬಂದ ಎಲ್ಲ ನಾಗರೀಕರಿಗೆ ನೊಟೀಸ್ ನೀಡಲಾಗುವುದು ಎಂದು ಕೊರೊನಾ ವೈರಸ್ ತಡೆ ಕುರಿತಂತೆ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಯಾಗಿರುವ ಡಿಸಿಪಿ ಇಶಾಪಂತ್ ತಿಳಿಸಿದ್ದಾರೆ.
ನಗರದಲ್ಲಿ ಈವರೆಗೂ 42 ಸಾವಿರ ವಿದೇಶಿಗರು ಬಂದು ಹೋಗಿದ್ದಾರೆ. ಈ ಪೈಕಿ ನಗರದಲ್ಲಿ ವಾಸ್ತವ್ಯ ಹೂಡಿದವರ ಸಂಖ್ಯೆ 30 ಸಾವಿರವಿದೆ. ಇವರಿಗೆ ಕೊರೊನಾ ಸೋಂಕು ಕುರಿತಂತೆ ತಿಳುವಳಿಕೆ ಮೂಡಿಸಿ ಆರೋಗ್ಯ ತಪಾಸಣೆ ಒಳಗಾಗುವಂತೆ ನೊಟೀಸ್ ನೀಡಲಾಗುವುದು. ಇವರು ವಾಸಿಸುತ್ತಿರುವ ನೆರೆಹೊರೆ ಮನೆಯವರಿಗೂ ಹಾಗೂ ವಸತಿ ನಾಗರಿಕ ಕ್ಷೇಮಾಭಿವೃದ್ಧಿ ಸಂಘದವರಿಗೆ ನೊಟೀಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ವಿದೇಶದಿಂದ ಬಂದಿರುವ ಪ್ರಯಾಣಿಕರ ಕೈಗೆ ಸೀಲ್ ಹಾಕಿ 14 ದಿನಗಳ ಕಾಲ ಗೃಹ ಬಂಧನದಲ್ಲಿ ಇರುವಂತೆ ತಾಕೀತು ಮಾಡಲಾಗಿದೆ. ಒಂದು ವೇಳೆ ನಿರ್ಲಕ್ಷ್ಯ ವಹಿಸಿ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವುದು ಕಂಡು ಬಂದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ವೈಟ್ ಫೀಲ್ಡ್, ನಗರ ಪೂರ್ವ ವಲಯ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಯರ ನೆಲೆಸಿರುವ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಆರೋಗ್ಯ, ಬಿಬಿಎಂಪಿ ಹಾಗೂ ಪೊಲೀಸರು ಒಳಗೊಂಡ ತಂಡ ರಚಿಸಿ ಪ್ರತ್ಯೇಕ ನಿಗಾ ಘಟಕ (ಕ್ವಾರಂಟೈನ್ ಸೆಂಟರ್) ತೆರೆಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.