ಬೆಂಗಳೂರು: ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವದಂದು ಹೊಸ ಹೊಸ ಪರಿಕಲ್ಪನೆಯ ಮೂಲಕ ಗಾಜಿನ ಮನೆಯಲ್ಲಿ ಹೂಗಳ ಆಕೃತಿಗಳು ನೋಡುಗರ ಮನ ಕದಿಯುತ್ತಿದ್ದವು. ಬೆಂಗಳೂರಿಗರು ಮಾತ್ರವಲ್ಲದೇ ಅನ್ಯ ಜಿಲ್ಲೆ, ರಾಜ್ಯ, ದೇಶಗಳಿಂದಲ್ಲೂ ಪ್ರವಾಸಿಗರು ಬಂದು ಲಾಲ್ ಬಾಗ್ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಕಣ್ತುಂಬಿ ಕೊಳ್ಳುತ್ತಿದ್ದರು. ಆದರೆ ಇಂತಹ ಖುಷಿಯ ಕ್ಷಣಕ್ಕೆ ಕೊರೊನಾ ಬ್ರೇಕ್ ಹಾಕಿದೆ.
ನಾಳೆ ಸ್ವಾತಂತ್ರ್ಯ ದಿನ, ವಾರಕ್ಕೂ ಮೊದಲೇ ಫಲಪುಷ್ಪ ಪ್ರದರ್ಶನ ಆರಂಭಗೊಳ್ಳಬೇಕಿತ್ತು. ಆದರೆ ರಾಜ್ಯದಲ್ಲಿ ಕೊರೊನಾ ಹರಡುತ್ತಿರುವ ರೀತಿಗೆ ಸದ್ಯ ಎಲ್ಲದಕ್ಕೂ ಬ್ರೇಕ್ ಹಾಕಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ಬರೋಬ್ಬರಿ 5-6 ಲಕ್ಷಕ್ಕೂ ಹೆಚ್ಚು ಮಂದಿ ಬರುತ್ತಿದ್ದರು. ಹಾಗಾಗಿ ಇದು ಕೊರೊನಾ ಹರಡಲು ಸುಲಭ ಸ್ಥಳವಾಗಲಿದೆ. ಈ ಹಿನ್ನೆಲೆ ಮೈಸೂರು ಉದ್ಯಾನ ಕಲಾ ಸಂಘ, ತೋಟಗಾರಿಕೆ ಇಲಾಖೆ ಪ್ರದರ್ಶನವನ್ನು ರದ್ದುಗೊಳಿಸಿದೆ.
ಫಲಪುಷ್ಪ ಪ್ರದರ್ಶನ ರದ್ದಾಗಿರುವುದು ಇದು ಮೊದಲೇನಲ್ಲ:
ಈವರೆಗೆ ಸಸ್ಯಕಾಶಿಯಲ್ಲಿ 211 ಫಲಪುಷ್ಪ ಪ್ರದರ್ಶನಗಳು ನಡೆದಿವೆ. ಅಂದಹಾಗೇ, ಲಾಲ್ ಬಾಗ್ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ರದ್ದಾಗಿರುವುದು ಇದು ಮೊದಲೇನಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಹಾಗೂ ಪ್ಲೇಗ್ ಮಾರಿಯಿಂದಾಗಿ ಪ್ರದರ್ಶನ ರದ್ದಾಗಿತ್ತು. ಇದೀಗ ಮೂರನೇ ಬಾರಿ ಕೊರೊನಾ ಮಾರಿಗೆ ಪ್ರದರ್ಶನ ಸ್ಥಗಿತವಾಗಿದೆ. ಈ ಮೂರು ವಿಷಮ ಪರಿಸ್ಥಿತಿಯಲ್ಲಿ ಪ್ರದರ್ಶನ ರದ್ದಾಗಿರುವುದನ್ನ ನೆನಪಿಸಿಕೊಳ್ಳುತ್ತಾರೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್.