ಬೆಂಗಳೂರು : ರಾಜರಾಜೇಶ್ವರಿ ನಗರದ ಚುನಾವಣಾ ಸಿದ್ಧತೆ ಕುರಿತು ಆಯುಕ್ತರು ಹಾಗೂ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಚುನಾವಣೆಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳ ಜೊತೆ ಮಲ್ಲೇಶ್ವರ ಐಪಿಪಿ ಕೇಂದ್ರದಲ್ಲಿ ಸಮನ್ವಯ ಸಭೆ ನಡೆಸಿದರು.
ಚುನಾವಣೆ ಸಂಬಂಧ 31 ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ನೀತಿಸಂಹಿತೆ ಜಾರಿಗೊಳಿಸುವ ಮತಗಟ್ಟೆಗಳ ನಿರ್ವಹಣೆ, ಇವಿಎಂ ಮತ್ತು ವಿವಿಪ್ಯಾಡ್ಗಳ ವ್ಯವಸ್ಥೆ, ಸಿಬ್ಬಂದಿ ನಿಯೋಜನೆ, ವಾಹನಗಳ ವ್ಯವಸ್ಥೆ, ಸೆಕ್ಟರ್ ಅಧಿಕಾರಿಗಳ ನಿರ್ವಹಣೆ, ಚುನಾವಣಾ ಖರ್ಚು ವೆಚ್ಚಗಳ ನಿರ್ವಹಣೆ, ಕಾನೂನು ಮತ್ತು ಪೊಲೀಸ್ಗೆ ಸಂಬಂಧಿಸಿದ ವಿಷಯ ಸೇರಿ ಇನ್ನಿತರೆ ವಿಯಗಳ ಕುರಿತಂತೆ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಆದಾಯ ತೆರಿಗೆ, ಅಬಕಾರಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಆಯುಕ್ತರು ತಿಳಿಸಿದರು.
![Kamal Pant convenes for RR nagar by-election](https://etvbharatimages.akamaized.net/etvbharat/prod-images/kn-bng-07-election-meeting-7202707_03102020212524_0310f_1601740524_1074.jpg)
ರಾಜರಾಜೇಶ್ವರಿ ನಗರದಲ್ಲಿ 9 ವಾರ್ಡ್ಗಳು ಬರಲಿವೆ. ಆ ವಾರ್ಡ್ಗಳಿಗೆ ಚುನಾವಣಾ ಆಯೋಗದ ಪ್ರಕಾರ 18 ಪ್ಲೈಯಿಂಗ್ ಸ್ಕ್ವಾಡ್ಗಳನ್ನು 3 ಮೂರು ಪಾಳಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಅದನ್ನು 27 ಪ್ಲೈಯಿಂಗ್ ಸ್ಕ್ವಾಡ್ಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಈ ತಂಡದಲ್ಲಿ ಪಾಲಿಕೆ, ಪೊಲೀಸ್, ಅಬಕಾರಿ ಅಧಿಕಾರಿಗಳು ಒಟ್ಟಿಗೆ ಕಾರ್ಯನಿರ್ವಹಿಸಲಿದ್ದಾರೆ.
ಇದಲ್ಲದೆ 10 ಸ್ಟಾಟಿಕ್ ತಂಡ ಹಾಗೂ 10 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ 5 ವಿಡಿಯೋ ಸರ್ವಲೆನ್ಸ್ ಹಾಗೂ ವಿಡಿಯೋ ವೀಕ್ಷಣೆ ತಂಡಗಳನ್ನು ಕೂಡ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಆದಾಯ ತೆರಿಗೆ ಇಲಾಖೆ ಜೊತೆ ಸಮನ್ವಯದಿಂದ ಕೆಲಸ ಮಾಡಿ ಎಲ್ಲಾದರೂ ದೂರು/ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ. ಅಬಕಾರಿ ಇಲಾಖೆಯಿಂದಲೂ ತಂಡಗಳನ್ನು ರಚನೆ ಮಾಡಿ ತಪಾಸಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ದೂರು ನೀಡಲು ಶೀಘ್ರ ದೂರವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಚುನಾವಣಾ ಆಯೋಗದಿಂದ ಎಲೆಕ್ಷನ್ ಅಬ್ಸರ್ವರ್ ಬರಲಿದ್ದು, ಅವರು ತಪಾಸಣೆ ನಡೆಸಲಿದ್ದಾರೆ ಎಂದರು.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳ ಭಾವಚಿತ್ರ, ಹೆಸರಿರುವ ಭಿತ್ತಿಪತ್ರಗಳು, ನಾಮಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು. ಪ್ರಮುಖವಾಗಿ ಬಸ್ ತಂಗುದಾಣ, ಶುದ್ಧ ಕುಡಿಯುವ ನೀರಿನ ಘಟಕ, ಉದ್ಯಾನವನಗಳಲ್ಲಿ ಭಾವಚಿತ್ರ ಹಾಗೂ ಹೆಸರುಗಳಿರಲಿದ್ದು, ಕೂಡಲೇ ಅದನ್ನು ತೆಗೆಯಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.