ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯವನ್ನು ಕುಗ್ಗಿಸಲು ಸರ್ಕಾರ ಮುಂದಾಗಿರುವುದಕ್ಕೆ ತಮ್ಮ ವಿರೋಧವಿದೆ ಎಂದು ನಮ್ಮ ಬೆಂಗಳೂರು ಫೌಂಡೇಶನ್ ಮುಖ್ಯಸ್ಥ ಹರೀಶ್ ಕುಮಾರ್ ಹೇಳಿದರು.
ನಗರದ ಟ್ರಿನಿಟಿ ಸರ್ಕಲ್ ಬಳಿಯ ನಮ್ಮ ಬೆಂಗಳೂರು ಫೌಂಡೇಶನ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಮ್ಮ ಬೆಂಗಳೂರು ಫೌಂಡೇಶನ್ ಮುಖ್ಯಸ್ಥ ಹರೀಶ್ ಕುಮಾರ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಉಳಿಸಿಕೊಳ್ಳುವುದು ಅಗತ್ಯ. ಇದರ ವಿನಾಶವು ನಗರದ ಹವಾಮಾನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. 268.96 ಚದರ ಕಿ.ಮೀ ವಿಸ್ತೀರ್ಣದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯವಿದೆ. ಇದನ್ನು ಈಗ ರಾಜ್ಯ ಸರ್ಕಾರ 168.84 ಚದರ ಕಿ.ಮೀಗೆ ಕುಗ್ಗಿಸಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಹೀಗೆ ಆಗಲು ನಾವು ಬಿಡಲ್ಲ ಎಂದರು.
ಈ ಹಿಂದೆ ಇದ್ದ ಸರ್ಕಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ 268.96 ಚದರ ಕಿ.ಮೀ ವಿಸ್ತೀರ್ಣ ಉಳಿಸಿಕೊಳ್ಳಲು ಬದ್ಧ ಎಂದಿತ್ತು. ಆದರೆ ಈಗಿನ ಸರ್ಕಾರ ಕೇಂದ್ರ ಅರಣ್ಯ ಇಲಾಖೆಗೆ ಅರಣ್ಯ ವಲಯ ವಸ್ತೀರ್ಣ ಕುಗ್ಗಿಸುವಂತೆ ಮನವಿ ಮಾಡಿಕೊಂಡಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪರಿಸರವಾದಿ ವಿಜಯ್ ನಿಶಾಂತ್ ಸೇರಿ ಬನ್ನೇರುಘಟ್ಟ ಭಾಗದ ಹತ್ತಾರು ರೈತರು ಭಾಗಿಯಾಗಿದ್ದರು.