ಬೆಂಗಳೂರು: ಕೊರೊನಾ ಎರಡನೇ ಅಲೆ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ವರದಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿತೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಎರಡನೇ ಅಲೆಯಲ್ಲಿ ಮಿತಿ ಮೀರುತ್ತಿರುವ ಕೊರೊನಾಕ್ಕೆ ಕಡಿವಾಣ ಹಾಕುವುದು ಸದ್ಯದ ಮಟ್ಟಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಆತಂಕಕಾರಿ ವರದಿಯೊಂದನ್ನು ಸಲ್ಲಿಸಿತ್ತು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸದಿದ್ದರೆ ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ವರದಿ ನೀಡಿತ್ತು. ಮೇ ತಿಂಗಳ ಹೊತ್ತಿಗೆ ಬೆಂಗಳೂರಿನಲ್ಲೇ ಪ್ರತಿದಿನ 20,000 ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ತಿಳಿಸಿತ್ತು. ಇದೀಗ ರಾಜ್ಯದಲ್ಲಿ ನಿನ್ನೆ 25,795 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಇನ್ನು ಬೆಂಗಳೂರು ನಗರದಲ್ಲಿ 15,244 ಪ್ರಕರಣಗಳು ವರದಿಯಾಗಿರುವುದು ಆತಂಕ ಸೃಷ್ಟಿಸಿದೆ.
ಸಲಹಾ ಸಮಿತಿ ವರದಿಯಲ್ಲಿ ಕೊರೊನಾ ಮರಣದ ಪ್ರಮಾಣವೂ ಎರಡು ಪಟ್ಟು ಹೆಚ್ಚಲಿದ್ದು, ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಐಸಿಯು ಕೊರತೆ ಆಗಬಹುದು. ಚಿತಾಗಾರಗಳಲ್ಲಿ ಜಾಗದ ಸಮಸ್ಯೆ ಉಂಟಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.
ಕೊರೊನಾ ಸೋಂಕು ಹಳ್ಳಿಗಳಿಗೂ ಹರಡಬಹುದು. ಓರ್ವ ಸೋಂಕಿತನಿಂದ ಮನೆಮಂದಿಗೆಲ್ಲ ಕೊರೊನಾ ತಗುಲುತ್ತದೆ. ಮಾರುಕಟ್ಟೆಗಳು ಸೇರಿ ಇನ್ನಿತರ ಜನನಿಬಿಡ ಸ್ಥಳಗಳಲ್ಲಿ ಕೊರೊನಾ ಸೋಂಕು ಉಲ್ಬಣ ಆಗಬಹುದು. ಹಾಗಾಗಿ ಶೀಘ್ರವೇ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಕೋವಿಡ್ ತಾಂತ್ರಿಕ ಸಮಿತಿ ತಿಳಿಸಿತ್ತು. ಆದರೆ, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುವಲ್ಲಿ ಎಡವಿದೆ. ಕೊರೊನಾ ನಿಯಂತ್ರಿಸುವಲ್ಲಿ ಸಮನ್ವಯದ ಕೊರತೆ ಎದುರಾಯಿತೇ? ಎಂಬ ಚರ್ಚೆಗಳು ನಡೆಯುತ್ತಿವೆ.
ತಜ್ಞರು ನೀಡಿದ ವರದಿಯನ್ನು ಆಧರಿಸಿ ತಕ್ಷಣ ಕ್ರಮ ಕೈಗೊಂಡಿದ್ದರೆ ಇಷ್ಟು ಸಮಸ್ಯೆ ಎದುರಾಗುತ್ತಿರಲಿಲ್ಲ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಕಳೆದ ವರ್ಷ ಕಾಡಿದ್ದ ಕೊರೊನಾ ಸೋಂಕನ್ನು ಈ ಬಾರಿ ನಿಯಂತ್ರಣಕ್ಕೆ ತರಲಾಗುತ್ತದೆ ಎಂದಿದ್ದ ಸರ್ಕಾರ ಹಾಗೂ ಬಿಬಿಎಂಪಿ ಪ್ಲಾನ್ ವಿಫಲವಾಗಿದೆ. ಇದರ ನಡುವೆ ಲಸಿಕೆ ಇದ್ದರೂ ಏನೂ ಕೆಲಸ ಮಾಡುತ್ತಿಲ್ಲ ಎಂಬ ಆರೋಪವೂ ಇದೆ. ಇದರ ಮಧ್ಯೆ ಮುಂದಿನ ದಿನಗಳಲ್ಲಿ ಕೊರೊನಾ ಸುನಾಮಿ ಅಲೆಯ ಪ್ರಭಾವ ನಿರೀಕ್ಷೆಗೂ ಮೀರಿ ಬರಲಿದೆ ಎನ್ನುವುದು ತಾಂತ್ರಿಕ ಸಲಹಾ ಸಮಿತಿ ಲೆಕ್ಕಾಚಾರವಾಗಿದ್ದು, ಲಾಕ್ಡೌನ್ ಗಾಳಿಯೂ ಸುಳಿದಾಡುತ್ತಿದೆ.
ಸರ್ಕಾರವೇ ರಚಿಸಿರುವ ತಾಂತ್ರಿಕ ಸಲಹಾ ಸಮಿತಿ ಕೊರೊನಾ ಎರಡನೇ ಅಲೆಯ ಬಗ್ಗೆ ನವಂಬರ್ನಿಂದೀಚೆಗೆ ಮೂರು ವರದಿ ನೀಡಿದೆ. ಆಗಲೇ ಸರ್ಕಾರ ಎಚ್ಚರ ವಹಿಸಬೇಕಿತ್ತು. ಆದರೆ ತಜ್ಞರ ವರದಿಯನ್ನೇ ನಿರ್ಲಕ್ಷ್ಯ ಮಾಡಿ ಸರ್ಕಾರ ದೊಡ್ಡ ಅಪರಾಧ ಎಸಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.