ಬೆಂಗಳೂರು: ಮಹಿಳಾ ಮೀನುಗಾರರ ಸಾಲಮನ್ನಾ ಪ್ರಕ್ರಿಯೆ ಪ್ರಗತಿಯಲ್ಲಿರುವ ಹಿನ್ನೆಲೆ ಮಾಸಿಕ ಕಂತು ಪಾವತಿಸುವಂತೆ ನೋಟಿಸ್ ಜಾರಿಗೊಳಿಸದಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಇಲಾಖಾ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿ, ಮಹಿಳಾ ಮೀನುಗಾರರ 50 ಸಾವಿರ ವರೆಗಿನ ಸಾಲವನ್ನು ಸಿಎಂ ಮನ್ನಾ ಮಾಡಿದ್ದಾರೆ. ಅದರಂತೆ ಸುಮಾರು 23 ಸಾವಿರ ಮಹಿಳಾ ಮೀನುಗಾರರು ಸಾಲಮನ್ನಾ ವ್ಯಾಪ್ತಿಗೆ ಬರುತ್ತಾರೆ. ಒಟ್ಟು 80 ಕೋಟಿ ರೂ. ಸಾಲಮನ್ನಾ ಆಗಲಿದೆ. ಈಗಾಗಲೇ ಫಲಾನುಭವಿಗಳ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸಿದರು.
ಆದರೆ ಮಾಸಿಕ ಕಂತು ಕಟ್ಟುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಈ ಸಂಬಂಧ ಮೀನುಗಾರರು ದೂರು ನೀಡಿದ್ದು, ಸರ್ಕಾರದ ಪ್ರಕ್ರಿಯೆ ಮುಗಿಯುವವರೆಗೂ ಸಾಲ ಮರುಪಾವತಿಗೆ ಒತ್ತಾಯ ಮಾಡದಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ. ಬಂದರುಗಳ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಅವುಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಒಳನಾಡು ಜಲಸಾರಿಗೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಕೇರಳ ಮಾದರಿಯಲ್ಲಿ ಬೋಟ್ ಹೌಸ್ ನಿರ್ಮಾಣಕ್ಕೆ ಯೋಜಿಸಿದ್ದು, ಈ ಬಗ್ಗೆ ಇನ್ಫೋಸಿಸ್ ಜೊತೆ ಚರ್ಚೆ ಮಾಡುತ್ತಿದ್ದು, ಅಧಿಕಾರಿಗಳು ಅಧ್ಯಯನ ನಡೆಸಿ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಕಾರವಾರದ ಸರ್ವಋತು ಬಂದರನ್ನು ಸಾಗರ ಮಾಲಾ ಯೋಜನೆಯಡಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಇನ್ನು ಕಡಲು ಕೊರೆತದಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಕಡಲಕೊರೆತಕ್ಕೆ ಶಾಶ್ವಾತ ತಡೆ ಗೋಡೆ ನಿರ್ಮಾಣಕ್ಕೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇವೆ. ಸುವರ್ಣ ತ್ರಿಭುಜ ಬೋಟ್ ಅಪಘಾತ ಪ್ರಕರಣ ಬಳಿಕ ಸಂಕಷ್ಟದಲ್ಲಿರುವ ಮೀನುಗಾರರ ಜತೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಇಸ್ರೋ ಮೂಲಕ ಹೊಸ ಮೊಬೈಲ್ ತಂತ್ರಾಂಶ ಸಿದ್ಧಪಡಿಸಲು ಯೋಜಿಸಲಾಗಿದೆ. ಮೀನುಗಾರರಿಗೆ ಒಂದು ವೇಳೆ ಏನಾದರೂ ತೊಂದರೆ ಆದರೆ ರಕ್ಷಣೆಗೆ ನೆರವಾಗುವ ನಿಟ್ಟಿನಲ್ಲಿ ತಂತ್ರಾಂಶ ಅಭಿವೃದ್ಧಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.
ನಾಡ ದೋಣಿಗೆ 178 ಲೀಟರ್ ಸೀಮೆ ಎಣ್ಣೆ ಕೊಡುತ್ತಿದ್ದು, ಅದನ್ನು 300 ಲೀಟರ್ ಏರಿಕೆ ಮಾಡ ಬೇಕೆಂಬ ಮೀನುಗಾರರ ಬೇಡಿಕೆಗೆ ಒಪ್ಪಿಗೆ ನೀಡಿದ್ದೇವೆ. 9,044 ನಾಡದೋಣಿಗಳಿಗೆ 300 ಲೀಟರ್ ಸೀಮೆ ಎಣ್ಣೆ ನೀಡಲು ಕೇಂದ್ರಕ್ಕೆ ಮನವಿ ಮಾಡುತ್ತೇವೆ.ಮೀನುಗಾರರನ್ನೂ ಅಸಂಘಟಿತ ಕಾರ್ಮಿಕರ ವ್ಯಾಪ್ತಿಗೆ ತಂದು ಅವರಿಗೆ ಭದ್ರತೆ ನೀಡುವ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ಮುಜರಾಯಿ ಇಲಾಖೆಗೆ ಸಂಬಂಧಿಸಿದ 27 ಸಾವಿರ ದೇವಸ್ಥಾನಗಳಿಗೆ ತಸ್ಥಿಕ್ ನೀಡುತ್ತಿದ್ದು. ವರ್ಷಕ್ಕೆ 48 ಸಾವಿರ ನೀಡುತ್ತಿದ್ದು, ಇ-ಆಡಳಿತ ಮೂಲಕ ಆ ಹಣ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಬಂದಂತಹ ಹಣವನ್ನು ಬೇರೆ ಯಾವುದೇ ಇತರೆ ಧರ್ಮದ ಉದ್ದೇಶಗಳಿಗೆ, ಅನ್ಯ ಉದ್ದೇಶಗಳಿಗೆ ಬಳಸಿಲ್ಲ, ಹಿಂದೆಯೂ ಬಳಸಿಲ್ಲ, ಮುಂದೆಯೂ ಬಳಸಲ್ಲ. ಈ ಹಿಂದೆ ಇಲಾಖೆಯ ಹಣ ದುರ್ಬಳಕೆ ಆಗಿರುವ ಬಗ್ಗೆ ಸೂಕ್ತ ದಾಖಲೆ ಇದ್ದರೆ ಪರಿಶೀಲಿಸಿ, ತನಿಖೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.